ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಗುರುವಾರ ಒಂದೇ ದಿನ ಬೆಂಗಳೂರು ನಗರದಲ್ಲಿ 18 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿದ್ದ ವ್ಯಕ್ತಿ 9 ಮಂದಿಗೆ ಸೋಂಕು ಹರಡಿಸಿದ್ದು, ಪರಿಣಾಮ ಹೊಂಗಸಂದ್ರ ವಾರ್ಡ್ ಸೀಲ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಬೆಂಗಳೂರಿನ ಟಿಪ್ಪು ನಗರದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ಇನ್ನು 252ನೇ ರೋಗಿಯ ಸಂಪರ್ಕ ಹೊಂದಿದ್ದ 41 ವರ್ಷದ ವ್ಯಕ್ತಿಗೂ ಕೊರೋನಾ ದೃಢಪಟ್ಟಿದೆ. ಇನ್ನು ಪಾದರಾಯನಪುರದ 3 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ಇಬ್ಬರು ರಾಮನಗರ ಜೈಲಿನಲ್ಲಿದ್ದವರಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಈ ಮೂಲಕ ಬೆಂಗಳೂರಲ್ಲಿ ರಾಜ್ಯದಲ್ಲೇ ಅತ್ಯಧಿಕ 18 ಪ್ರಕರಣ ಒಂದೇ ದಿನ ವರದಿಯಾದಂತೆ ಆಗಿದೆ.
ಕೇಸ್ 419 ಸೋಂಕಿತ ಬಿಹಾರ ಮೂಲದ ವ್ಯಕ್ತಿ ಹೊಂಗಸಂದ್ರದಲ್ಲಿ ರೂಮೊಂದರಲ್ಲಿ ಜೀವನ ನಡೆಸುತ್ತಿದ್ದು, ರೂಮಿನಲ್ಲಿ ಇನ್ನೂ ನಾಲ್ವರು ವಾಸವಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಇವರಲ್ಲೂ ಸೋಂಕು ಹರಡಿಸಿದ್ದು, ಸಂಪರ್ಕದಲ್ಲಿದ್ದ ಇನ್ನೂ ಐವರು ನೆರೆಮನೆಯವರಿಗೂ ಸೋಂಕು ತಗುಲಿದೆ.
ಜ್ವರ ಬಂದ ಕೂಡಲೇ ವ್ಯಕ್ತಿ ವೆನು ಆಸ್ಪತ್ರೆ ಕೇಂದ್ರಕ್ಕೆ ತೆರಳಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಟೈಫಾಯ್ಡ್ ಇದೆ ಎಂದು ಚಿಕಿತ್ಸೆ ನೀಡಿದ್ದಾರೆ. ಆರಂಭದಲ್ಲಿ ಆರೋಗ್ಯ ಉತ್ತಮವಾಗುತ್ತಿದೆ ಎಂದೆನಿಸಿದರೂ ನಂತರ ದಿನಗಳಲ್ಲಿ ಆತನಿಗೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಂಡು ಬಂದಿದೆ, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ತೆರಲಿದ್ದು, ಅಲ್ಲಿಂದ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಇಲ್ಲಿಂದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಸುಮಾರು 140 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಬಿಹಾರಿ ವ್ಯಕ್ತಿಯ ಬಗ್ಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆ ವಿರುದ್ಧ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತ ವೆನು ಆಸ್ಪತ್ರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಹಾಗೂ ವೈದ್ಯರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಕ್ವಾರಂಟೈನ್ ನಲ್ಲಿಕ ಕೆಲ ಮಂದಿಯನ್ನು ಈಗಾಗಲೇ ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ರಮಣ್ ಜನರಲ್ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement