ರಾಜ್ಯವೀಗ ನಾವಿಕನಿಲ್ಲದ ದೋಣಿಯಂತಾಗಿದೆ; ಜನರನ್ನು ದೇವರೇ ಕಾಪಾಡಬೇಕು: ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು' ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ಕೊಡಗು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಗುಡ್ಡಗಳು ಕುಸಿದಿದೆ. ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕದ ಪ್ರಸ್ತುತ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಟ್ವಿಟ್ಟರ್ ಮೂಲಕ ಟೀಕಿಸಿದ್ದಾರೆ.
ಕಳೆದ ಬಾರಿ ಪ್ರವಾಹ ರಾಜ್ಯದಲ್ಲಿ ದೊಡ್ಡಮಟ್ಟದ ಅನಾಹುತವನ್ನೇ ಸೃಷ್ಟಿಸಿತ್ತು. ಅದನ್ನು ಕಂಡಾದರೂ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿತ್ತು. ಸರ್ಕಾರ ಇತಿಹಾಸದಿಂದ ಪಾಠ ಕಲಿಬೇಕಿತ್ತು. ಕೇವಲ 1 ವರ್ಷದ ಹಿಂದೆ ಸುರಿದ ಮಳೆ ಮಾಡಿದ ಅನಾಹುತ ಸರ್ಕಾರ ನಡೆಸುವವರ ಗಮನದಲ್ಲಿರಬೇಕಿತ್ತು. ಆದರೆ ಸರ್ಕಾರ ನಿರ್ಲಕ್ಷಧೋರಣೆ ತಾಳಿರುವುದು ರಾಜ್ಯದ ಜನರ ದುರದೃಷ್ಟವೆಂದು ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಹೇಳಿದ್ದಾರೆ.
ಕೊರೊನಾ ಕಂಟಕವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರದ ಎದುರು ಈಗ ಪ್ರವಾಹವಿದೆ. ಕಳೆದ ಬಾರಿ ಸರ್ಕಾರ ಸಮರ್ಪಕ ಪ್ರವಾಹ ಪರಿಹಾರ ನೀಡುವಲ್ಲಿ ಜನರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಈಗ ಮತ್ತೆ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನು ನೋಡಿದರೆ ರಾಜ್ಯ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು
ದೇವರೇ ಕಾಪಾಡಬೇಕು ಎಂದು ಸರ್ಕಾರದ ವೈಫಲ್ಯತೆಯನ್ನು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.