ಅಕ್ರಮ ಸಂಬಂಧ; ಸುಪಾರಿ ನೀಡಿ ತಂದೆಯನ್ನೇ ಕೊಲ್ಲಿಸಿದ್ದ ಮಗನ ಬಂಧನ

ಅಕ್ರಮ ಸಂಬಂಧ ಮತ್ತು ಆಸ್ತಿಯನ್ನು ಆಕೆಗೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಪುತ್ರನೋರ್ವ ಸುಪಾರಿ ನೀಡಿ ತಂದೆಯನ್ನೇ ಕೊಲ್ಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಕ್ರಮ ಸಂಬಂಧ ಮತ್ತು ಆಸ್ತಿಯನ್ನು ಆಕೆಗೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಪುತ್ರನೋರ್ವ ಸುಪಾರಿ ನೀಡಿ ತಂದೆಯನ್ನೇ ಕೊಲ್ಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಎಂ.ವಿ. ನಗರದ ನಿವಾಸಿ ಪನ್ನೀರ್ ಸೆಲ್ವಂ (52 ವರ್ಷ) ಎಂಬುವರನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ, ಅವರ ಮಗ ಪಿ. ರಾಜೇಶ್‌ ಕುಮಾರ್ (26 ವರ್ಷ) ಹಾಗೂ ಮೂವರು ಸುಪಾರಿ ಹಂತಕರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಅವರು, 'ಶುಕ್ರವಾರ ಬೆಳಿಗ್ಗೆ 6.30ರ ಸುಮಾರಿಗೆ ಪನ್ನೀರ್ ಸೆಲ್ವಂ ಅವರು ವಿಜಿನಾಪುರದ ಸುಬ್ರಮಣಿ ದೇವಸ್ಥಾನಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿ ಕಾರಿನಲ್ಲಿ ಅಪಹರಿಸಿದ್ದ ದುಷ್ಕರ್ಮಿಗಳು, ಮಾರ್ಗಮಧ್ಯೆಯೇ ವಿಷದ  ಚುಚ್ಚುಮದ್ದು ನೀಡಿ ಕೊಂದಿದ್ದರು. ನಂತರ, ಮೃತದೇಹವನ್ನು ಕೋಲಾರ ಜಿಲ್ಲೆಯ ವೇಮ್‌ಗಲ್ ಬಳಿಯ ನೀಲಗಿರಿ ತೋಪಿನಲ್ಲಿ ಎಸೆದಿದ್ದರು. ಅಪಹರಣ ಸಂಬಂಧ ಪನ್ನೀರ್ ಸೆಲ್ವಂ ಅವರ ಪತ್ನಿ ಪಿ. ರಾಣಿ ದೂರು ನೀಡಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಕೆ.ಜಿ. ಸತೀಶ್ ನೇತೃತ್ವದ ತಂಡ, 24 ಗಂಟೆಯಲ್ಲೇ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಸುಪಾರಿ ನೀಡಿದ್ದ ಪನ್ನೀರ್ ಸೆಲ್ವಂ ಅವರ ಪುತ್ರ ರಾಜೇಶ್‌ಕುಮಾರ್ ಮತ್ತು ಆತನಿಂದ ಸುಪಾರಿ ಪಡೆದಿದ್ದ ಪಾರ್ಥಿಬನ್ (29 ವರ್ಷ) ಹಾಗೂ ಸಹಚರರಾದ ಸ್ಟ್ಯಾನ್ಲಿ (25 ವರ್ಷ), ಆನಂದ್ (21 ವರ್ಷ) ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ  ಭಾಗಿಯಾಗಿದ್ದ ಮತ್ತೆ ಕೆಲವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.

ಏನಿದು ಘಟನೆ?
ತಮಿಳುನಾಡಿನ ತಿರುಪತ್ತೂರಿನ ಪನ್ನೀರ್ ಸೆಲ್ವಂ, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಸ್ವಂತ ಉದ್ಯಮ ಆರಂಭಿಸಿದ್ದರು. ಇತ್ತೀಚೆಗೆ ಮಗ ರಾಜೇಶ್, ನಿವೇಶನ ಖರೀದಿಗೆ ಹಣ ಕೇಳಿದ್ದ. ಆದರೆ, ತಂದೆ ಕೊಟ್ಟಿರಲಿಲ್ಲ. ಮನೆ ಜವಾಬ್ದಾರಿಯನ್ನು ತನಗೆ ವಹಿಸುವಂತೆ ಮಗ ಪಟ್ಟು ಹಿಡಿದಿದ್ದ. ಈ ಸಂಬಂಧ  ಜಗಳ ನಡೆದಿತ್ತು. ಈ ನಡುವೆ ತನ್ನ ತಂದೆ ಬೇರೆ ಮಹಿಳೆ ಜೊತೆ ಸಲುಗೆ ಹೊಂದಿದ್ದು, ಆಕೆಗೆ ಹಣ ಹಾಗೂ ಆಭರಣ ನೀಡುತ್ತಿದ್ದಾನೆಂದು ತಿಳಿದ ಮಗ ಕೊಲೆಗೆ ಸಂಚು ರೂಪಿಸಿದ್ದ. ಆರೋಪಿ ಪಾರ್ಥಿಬನ್‌ ನನ್ನು ಸಂಪರ್ಕಿಸಿ, ತಂದೆಯನ್ನು ಕೊಲ್ಲಲು 10 ಲಕ್ಷ ರೂಗೆ ಸುಪಾರಿ ಕೊಟ್ಟಿದ್ದ. ಅಲ್ಲದೆ ಇದಕ್ಕಾಗಿ 3 ಲಕ್ಷ  ರೂಗಳನ್ನು ಮುಂಗಡವಾಗಿ ಪಾವತಿಸಿದ್ದ. ಮಾರ್ಚ್‌ 16ರಂದು ಜಯಂತಿ ಮುಖ್ಯರಸ್ತೆಯಲ್ಲಿ ಪನ್ನೀರ್‌ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು.

ಸ್ಥಳೀಯರು ಪನ್ನೀರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು.  ಅಂದು ಕೊಲೆ ಯತ್ನ ವಿಫಲವಾಗಿದ್ದರಿಂದಾಗಿ ರಾಜೇಶ್, ಮಾರಕಾಸ್ತ್ರಗಳಿಂದ ಹೊಡೆಯಬೇಡಿ. ಯಾರಿಗೂ ಅನುಮಾನ ಬಾರದಂತೆ ವಿಷದ ಚುಚ್ಚುಮದ್ದು ನೀಡಿ ಕೊಲೆ ಮಾಡಿ ಅರಣ್ಯದಲ್ಲಿ ಮೃತದೇಹ ಎಸೆದು ಬನ್ನಿ ಎಂದು ಆರೋಪಿಗಳಿಗೆ ಹೇಳಿದ್ದ. ಅದರಂತೆ ತಮಿಳುನಾಡಿನ ಜಾಕ್‌ ಎಂಬಾತನಿಂದ ವಿಷದ ಮಾತ್ರೆ  ತರಿಸಿಕೊಂಡಿದ್ದ ಆರೋಪಿಗಳು, ಅದನ್ನು ಕರಗಿಸಿ ಚುಚ್ಚುಮದ್ದು ಟ್ಯೂಬ್‌ನಲ್ಲಿ ತುಂಬಿದ್ದರು. ಬಳಿಕ ಅಪಹರಣಕ್ಕೆಂದು ಕಮ್ಮನಹಳ್ಳಿಯಲ್ಲಿರುವ ವೇಣು ಟ್ರಾವೆಲ್ಸ್‌ನಲ್ಲಿ ಕಾರು ಬಾಡಿಗೆ ಪಡೆದಿದ್ದರು. ದೇವಸ್ಥಾನಕ್ಕೆ ಹೊರಟಿದ್ದ ಮಾಹಿತಿಯನ್ನು ಮಗನಿಂದ ತಿಳಿದುಕೊಂಡ ಆರೋಪಿಗಳು, ಪನ್ನೀರ್ ಅವರನ್ನು ಅಡ್ಡಗಟ್ಟಿ  ಅಪಹರಿಸಿ ಕೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಇನ್‌ಸ್ಪೆಕ್ಟರ್‌ ಕೆ.ಜಿ.ಸತೀಶ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ. ತಂದೆ ಅಪಹರಣವಾದ ಬಗ್ಗೆ ರಾಜೇಶ್‌ ಖುದ್ದು ಠಾಣೆಗೆ ಬಂದು ದೂರು ನೀಡಿದ್ದ. ತಂದೆ ಅಪಹರಣವಾದ ಬಗ್ಗೆ ಸ್ವಲ್ಪವೂ ಆತನ ಮುಖದಲ್ಲಿ ಆತಂಕ ಕಾಣಿಸಲಿಲ್ಲ. ರಾಜೇಶ್‌ನ ಬಗ್ಗೆ  ಮಾಹಿತಿ ಕಲೆ ಹಾಕಿದ ಪೊಲೀಸರಿಗೆ, ಆತ ಸಾಲ ಮಾಡಿಕೊಂಡಿದ್ದು, ತಂದೆ ಬಳಿ ಆಗ್ಗಾಗ್ಗೆ ಜಗಳವಾಡುತ್ತಿದ್ದ ವಿಚಾರ ಗೊತ್ತಾಯಿತು. ಸೆಲ್ವಂ ಅವರು ಅಪಹರಣವಾದ ದಿನ ಆರೋಪಿ ಯಾವುದೇ ಅನುಮಾನ ಮೂಡಬಾರದು ಎಂಬ ಕಾರಣಕ್ಕೆ ಮೊಬೈಲ್‌ನ್ನು ಕೂಡ ಬಳಕೆ ಮಾಡಿರಲಿಲ್ಲ. ವಶಕ್ಕೆ ಪಡೆದು ತೀವ್ರ  ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟ ಎಂದು ತನಿಖಾಧಿಕಾರಿಗಳು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com