ಬೆಂಗಳೂರು: ರಾಜ್ಯ ಬಜೆಟ್ ಜತೆಗೆ ಹೆಚ್ಚುವರಿಯಾಗಿ 3,350 ಕೋಟಿ ರೂಪಾಯಿ ವೆಚ್ಚದ ಪೂರಕ ಬಜೆಟ್ಗೆ ವಿಧಾನ ಪರಿಷತ್ತಿನಲ್ಲಿಂದು ಅಂಗೀಕಾರ ದೊರೆತಿದೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಪೂರಕ ಬಜೆಟ್ನ್ನು ಮೇಲ್ಮನೆಯಲ್ಲಿ ಮುಖ್ಯಮಂತ್ರಿಯವರ ಪರವಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ಮಂಡನೆ ಮಾಡಿದರು.
ಕೊರೋನಾ ಸೋಂಕು ನಿಯಂತ್ರಣಕ್ಕಾಗಿ 205, ಕೋಟಿ, ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿಗಾಗಿ 350 ಕೋಟಿ, ಸಾರಿಗೆ ನಿಗಮಗಳ ಸಿಬ್ಬಂದಿ ವೇತನಕ್ಕಾಗಿ 168.75 ಕೋಟಿ ಲಾಕ್ಡೌನ್ ಅವಧಿಯಲ್ಲಿ ೫ ಕೆಜಿ ಹೆಚ್ಚುವರಿ ಅಕ್ಕಿ ನೀಡಲು 711 ಕೋಟಿ ರೂ, ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ವೇತನಕ್ಕಾಗಿ 62 ಲಕ್ಷ ರೂ ಹಾಗೂ ಇತರೆ ವೆಚ್ಚಗಳಿಗೆ 108.77 ಕೋಟಿ ರೂ ಇದರಲ್ಲಿ ಸೇರಿದೆ ಎಂದು ಮಾಹಿತಿ ನೀಡಿದರು.
ಪ್ರತಿವರ್ಷವೂ ಹೆಚ್ಚುವರಿಯಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸಲು ಪೂರಕ ಬಜೆಟ್ ಮಂಡನೆ ಮಾಡಲಾಗುತ್ತಿದೆ. ೨೦೨೦-೨೧ರಲ್ಲಿ 2.44 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರವಿದ್ದು, ಈವರೆಗೆ ಎರಡು ಕಂತುಗಳ ಪೂರಕ ಬಜೆಟ್ನಿಂದ ೭ ಸಾವಿರದ ೧೨೫ ಕೋಟಿ ರೂಪಾಯಿ ಮಾತ್ರ ಪೂರಕ ಬಜೆಟ್ ಮಂಡನೆಯಾಗಿದೆ. ತೆರಿಗೆ ಪಾಲಿನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ರೀತಿಯಿಂದಲೂ ಅನ್ಯಾಯ ಅಥವಾ ತಾರತಮ್ಯವಾಗಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.
ಪೂರಕ ಬಜೆಟ್ ಮಂಡನೆ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಆಗ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಬಾರಿ ಕೊರೊನಾದಿಂದ ಎಲ್ಲಾ ರಾಜ್ಯಗಳಂತೆ ಕೇಂದ್ರದಲ್ಲೂ ಆದಾಯ ಕಡಿಮೆ ಇದೆ. ಆದರೆ, ಕರ್ನಾಟಕಕ್ಕೆ ಸಿಗಬೇಕಾದ ಪಾಲು ದೊರೆತಿದೆ; ಮುಂದೆ ಕೂಡ ಸರಿಯಾದ ಪಾಲು ಪಡೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಬಳಿಕ ಕಾಂಗ್ರೆಸ್ನ ಸಿ.ಎಂ. ಇಬ್ರಾಹಿಂ ಮಾತನಾಡಿ, ಕೇಂದ್ರಕ್ಕೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಬೇಕೆಂದು ಸಲಹೆ ಮಾಡಿದರು.
Advertisement