ಬಿಡದಿ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಮುಷ್ಕರ: ಸರ್ಕಾರ ಮಧ್ಯ ಪ್ರವೇಶಿಸಬೇಕು- ಎಚ್ ಡಿಕೆ
ಬೆಂಗಳೂರು: ಬಿಡದಿ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಮುಷ್ಕರಕ್ಕೆ ಎರಡು ತಿಂಗಳಾಗುತ್ತಿದೆಯಾದರೂ, ಪರಿಹಾರ ಕಾಣಿಸುತ್ತಿಲ್ಲ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ರಾಜ್ಯದ ಔದ್ಯಮಿಕ ಪ್ರಗತಿ ದೃಷ್ಟಿಯಿಂದ ಈ ಸಮಸ್ಯೆಗೆ ಅಂತ್ಯ ಹಾಡುವುದು ಈಗಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಲು ಸರ್ಕಾರ ಮುಂದಾಗಬೇಕು. ಅದರಿಂದ ರಾಜ್ಯಕ್ಕೂ ಲಾಭವಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಾರ್ಮಿಕರ ಪ್ರತಿಭಟನೆ, ದಾಂಧಲೆ, ಮುಷ್ಕರಗಳಂಥ ಘಟನೆಗಳು ಹೂಡಿಕೆದಾರರಲ್ಲಿ ಅಪನಂಬಿಕೆ ಹುಟ್ಟು ಹಾಕಲು ಕಾರಣವಾಗುತ್ತದೆ. ರಾಜ್ಯದಲ್ಲಿ ಸುಲಲಿತ ಉದ್ದಿಮೆ ನಡೆಸಲು ಅವಕಾಶಗಳಿಲ್ಲ ಎಂಬ ಭಾವನೆ ಮೂಡಿಸುತ್ತವೆ ಎಂದಿದ್ದಾರೆ.
ಈ ಎಲ್ಲ ಕಾರಣಗಳಿಂದಾಗಿ ಸರ್ಕಾರವೂ ಕೂಡಲೇ ಮಧ್ಯಪ್ರವೇಶ ಮಾಡಬೇಕು, ಸಂಸ್ಥೆಯ ಪ್ರತಿಭಟನಾ ನಿರತ ಕಾರ್ಮಿಕರು, ಸಂಸ್ಥೆಯ ಮುಖ್ಯಸ್ಥರನ್ನು ನೇರಾನೇರವಾಗಿ ಸಂಧಾನಕ್ಕೆ ಕೂರಿಸಬೇಕು. ಈ ವಿಚಾರದಲ್ಲಿ ಸರ್ಕಾರ ಸಂಪರ್ಕ ಸೇತುವಾಗಿ ನಡೆದುಕೊಳ್ಳಬೇಕು. ರಾಜ್ಯದ ಔದ್ಯಮಿಕ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ ಆಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.