ಭಾರತ್ ಬಂದ್: ಪ್ರತಿಭಟನೆಗಳಿಂದ ದೂರ ಉಳಿಯುವಂತೆ ಕೆಎಸ್ಆರ್'ಟಿಸಿ ಸಿಬ್ಬಂದಿಗೆ ಸೂಚನೆ
ಬೆಂಗಳೂರು: ಜ.8ರ ಭಾರತ್ ಬಂದ್ ಕರೆಗೆ ಬ್ಯಾಂಕಿಂಗ್ ವಲಯ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ನಿಂದ ದೂರ ಉಳಿಯುವಂತೆ ಕೆಎಸ್ಆರ್'ಟಿಸಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕೆಎಸ್ಆರ್'ಟಿಸಿ ನಿಗಮ ನಿರ್ದೇಶಕ ಶಿವಯೋಗಿ ಕಲಶದ್ ಅವರು, ಎಲ್ಲಾ ಸಿಬ್ಬಂದಿಗಳಿಗೂ ನೋಟಿಸ್ ಜಾರಿ ಮಾಡಿದ್ದು, ಬಂದ್ ನಲ್ಲಿ ಪಾಲ್ಗೊಳ್ಳದಂತೆ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಈ ಹಿಂದೆ ಭಾರತ್ ಬಂದ್ ಕರೆಗೆ ಕೆಎಸ್ಆರ್'ಟಿಸಿ ಸಿಬ್ಬಂದಿಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಎಸ್ಆರ್'ಟಿಸಿ ಸಾರ್ವಜನಿಕ ಉಪಯುಕ್ತತೆಯ ಸಂಸ್ಥೆಯಾಗಿದ್ದು, ಸಾಮಾನ್ಯ ಜನರಿಗೆ ಸಮಸ್ಯೆಯಾಗುವ ಯಾವುದೇ ಅಡೆಗಡೆಗಳನ್ನು ಒಪ್ಪಲು ಸಾಧ್ಯವಿಲ್ಲ. ನಿಗದಿಯಂತೆಯೇ ಕಾರ್ಯಗಳು ನಡೆಯಬೇಕು. ಬಂದ್ ದಿನದಂದು ಯಾವುದೇ ರಜೆಗಳನ್ನು ನೀಡಲು ಸಾಧ್ಯವಿಲ್ಲ. ನಿಯಮಗಳ ವಿರುದ್ಧ ನಡೆದವರಿಗೆ 2004ರ ಹೈಕೋರ್ಟ್ ಆದೇಶದಂತೆ ಶಿಸ್ತು ಕ್ರಮಗಳನ್ನು ಕೈಗೊಳ್ಳಳಲಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಈ ಮುಷ್ಕರಕ್ಕೆ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಪೈಕಿ ಕೆಲ ಸಂಘಟನೆಗಲು ಬೆಂಬಲ ಸೂಚಿಸಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿವೆ. ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಸೂಚಿಸಿ, ಸೇವೆ ಮುಂದುವರೆಸಲು ನಿರ್ಧರಿಸಿವೆ. ಹಾಗಾಗಿ ಬುಧವಾರ ಆಟೋ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಅಂತೆಯೇ ಸಿಐಟಿಯು, ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಲು ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ, ರ್ಯಾಲಿ ಹಮ್ಮಿಕೊಂಡಿವೆ. ಈ ಧರಣಿ ರ್ಯಾಲಿಯಲ್ಲಿ ಗಾರ್ಮೆಂಟ್, ಕಟ್ಟಡ, ಕಾರ್ಮಿಕರು, ಕಾರ್ಖಾನೆಗಳ ನೌಕರರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರು ಸಮಾವೇಶಗೊಳ್ಳುವ ಸಾಧ್ಯತೆಗಳಿವೆ.
ಭಾರತ್ ಬಂದ್ ಕುರಿತು ಕಾಸಗಿ ಅನುದಾನರಹಿತ ಶಾಲೆಗಳು ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ಮಕ್ಕಳು ಹಾಗೂ ಶಿಕ್ಷಕರ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಖಾಸಗಿ ಶಾಲಾ ಮಂಡಳಿಗಳು ಬದ್ಧವಾಗಿರಲಿವೆ. ಶಾಲೆಗಳಿಗೆ ರಜೆ ಘೋಷಿಸುವುದು ಅಥವಾ ಘೋಷಿಸದೇ ಇರುವುದು ಸರ್ಕಾರವೇ ನಿರ್ಧರಿಸಬೇಕು. ಒಂದು ವೇಳೆ ಸ್ಥಳೀಯವಾಗಿ ಪರಿಸ್ಥಿತಿ ಬಿಗಡಾಯಿಸಿದರೆ, ಆಯಾ ಶಿಕ್ಷಣ ಸಂಸ್ಥೆಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.