ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೂಡಿಕೆ ಆಕರ್ಷಿಸಲು ದಾವೋಸ್‌ಗೆ ಹೊರಟ ಮುಖ್ಯಮಂತ್ರಿ ಬಿಎಸ್ ವೈ ನಿಯೋಗ 

ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸ್ವಿಟ್ಜರ್​ಲೆಂಡ್​ನ ದಾವೋಸ್​ಗೆ ಪ್ರಯಾಣ ಬೆಳೆಸಲಿದ್ದಾರೆ.
Published on

ಬೆಂಗಳೂರು: ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸ್ವಿಟ್ಜರ್​ಲೆಂಡ್​ನ ದಾವೋಸ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ಮುಖ್ಯಮಂತ್ರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಆಯುಕ್ತ ಗುಂಜಾನ್ ಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಎಂ.ಬಿ.ಮರಂಕಲ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಪಿ. ರುದ್ರಪ್ಪಯ್ಯ ತೆರಳಲಿದ್ದಾರೆ. ಇಂದಿನಿಂದ ಒಟ್ಟು ಆರು ದಿನಗಳ ಕಾಲ ಮುಖ್ಯಮಂತ್ರಿ ಮತ್ತು ಈ ತಂಡ ದಾವೋಸ್​ನಲ್ಲಿ ಇರಲಿದೆ.

ಬೆಳಗ್ಗೆ 10.25ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿ, ಅಲ್ಲಿಂದ ಜುರಿಚ್​ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮಾರ್ಗವಾಗಿ ದಾವೋಸ್​ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 1 ಗಂಟೆಗೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಮಧ್ಯಾಹ್ನ 3.55ಕ್ಕೆ ದುಬೈನಿಂದ ಹೊರಟು ಸ್ವಿಜರ್‌ಲೆಂಡ್‌ನ ಜೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 7.50ರ ಸುಮಾರಿಗೆ ತಲುಪಲಿದ್ದಾರೆ. ತರುವಾಯ ಅಲ್ಲಿಂದ ರಸ್ತೆ ಮೂಲಕ ದಾವೋಸ್‌ಗೆ ತೆರಳಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಸಾಥ್‌ ನೀಡಲಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಬಿ.ಮರಮಕಲ್‌, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಪಿ.ರುದ್ರಯ್ಯ, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಖಾಸಗಿ ಕಾರ್ಯದರ್ಶಿ ಎಸ್‌.ದವಳೇಶ್ವರ್‌ ಸಹ ತೆರಳಿದ್ದಾರೆ ಎನ್ನಲಾಗಿದೆ.

ಸೋಮವಾರ (ಜ.20)ರಂದು ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಸಭೆ ಜರುಗಲಿದೆ ಹಾಗೂ ಕರ್ನಾಟಕ ಮಳಿಗೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ (ಜ.21) ವಿಶ್ವ ಆರ್ಥಿಕ ಒಕ್ಕೂಟದ ಸಭೆಗಳು ನಡೆಯಲಿವೆ. ಬುಧವಾರ (ಜ.22) ಕರ್ನಾಟಕದಲ್ಲಿ ಹೂಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ ಜರುಗಲಿದೆ. ಅಲ್ಲದೇ, ಉದ್ಯಮಿಗಳ ಜತೆ ವೈಯಕ್ತಿಕ ಸಭೆಗಳು ನಡೆಯಲಿವೆ. ಗುರುವಾರ (ಜ.23) ಯಡಿಯೂರಪ್ಪ ಸ್ವದೇಶಕ್ಕೆ ಹೊರಡಲಿದ್ದು, ಸಂಜೆ 5 ಗಂಟೆಗೆ ದಾವೋಸ್‌ನಿಂದ ರಸ್ತೆ ಮೂಲಕ ಜೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾತ್ರಿ 9.55ಕ್ಕೆ ಅಲ್ಲಿಂದ ಹೊರಟು ಶುಕ್ರವಾರ ಬೆಳಗ್ಗೆ 7.10ಕ್ಕೆ ದುಬೈ ತಲುಪಲಿದ್ದಾರೆ. ಕೆಲ ಸಮಯ ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಬೆಳಗ್ಗೆ 10ಕ್ಕೆ ದುಬೈನಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com