ಬೆಂಗಳೂರು: ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಶವಸಂಸ್ಕಾರ ಮಾಡಲಾಗುತ್ತಿದ್ದು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಈಗಾಲಾದರೂ ಮೂಕಪ್ರೇಕ್ಷಕನಂತೆ ಕೂರದೇ ಕೂಡಲೇ ಜಾಗೃತವಾಗಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ.
ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವ ಅವರು, ಕೊರೋನಾದಿಂದ ಜನ ತತ್ತರಿಸಿ ಹೋಗುತ್ತಿದ್ದರೂ, ಸೂಕ್ತ ಚಿಕಿತ್ಸೆಯಾಗಲೀ, ಔಷಧಿಯಾಗಲೀ, ಆಸ್ಪತ್ರೆಗಳ ಸೌಲಭ್ಯಗಳಾಗಲೀ ದೊರೆಯುತ್ತಿಲ್ಲ. ಸೋಂಕಿನಿಂದ ಮೃತಪಟ್ಟವನ್ನು ಅಮಾನವೀಯವಾಗಿ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ. ಇದೆಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ರಕ್ಷಣೆಗಾಗಿ ಮಾನವ ಹಕ್ಕುಗಳ ಆಯೋಗ ಮುಂದಾಗಬೇಕು. ಹಕ್ಕುಗಳ ಉಲ್ಲಂಘಿಸಿದವರ ವಿರುದ್ಧ ಶಿಕ್ಷೆ ವಿಧಿಸಬೇಕು. ಹಾನಿಗೊಳಗಾದವರಿಗೆ ಪರಿಹಾರ ಒದಗಿಸಿ ರಕ್ಷಣೆ ನೀಡಬೇಕಾದುದು ಮಾನವ ಹಕ್ಕುಗಳ ಆಯೋಗದ ಮುಖ್ಯ ಉದ್ದೇಶವಾಗಿದೆ. ಕೊರೋನಾ ಸೋಂಕಿತರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈಗಲಾದರೂ ಆಯೋಗ ಮೂಕಪ್ರೇಕ್ಷಕನಂತೆ ಕೂರದೆ ಕೂಡಲೇ ಜಾಗೃತವಾಗಬೇಕಿದೆ. ಪಾದರಸದಂತೆ ಚುರುಕಾಗಬೇಕು. ಈ ಕುರಿತು ಆಯೋಗ ಚರ್ಚೆ ಅಥವಾ ಮಾಹಿತಿಗಾಗಿ ಕರೆದರೆ ಬರಲು ನಾನು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ.
Advertisement