ಮಂಗಳೂರು: ಕೊರೋನಾ ಸೋಂಕಿತರಲ್ಲಿ ಬಹುಪಾಲು ಮಂದಿ ಅಂತರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿರುವುದು ಆತಂಕದ ಸಂಗತಿ.ಇತ್ತೀಚೆಗೆ ದೆಹಲಿಯಿಂದ ಮಂಗಳೂರಿಗೆ ಬಂದ ವ್ಯಕ್ತಿ ಹಲವು ರಾಜ್ಯಗಳಲ್ಲಿ ಚೆಕ್ ಪಾಯಿಂಟ್ ಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಕೊರೋನಾ ಸೋಂಕು ತಗಲಿಸಿಕೊಂಡು ಬಂದಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
31 ವರ್ಷದ ಯುವಕ ಮಂಗಳೂರಿಗೆ ಬಂದ ನಂತರ ಖಾಸಗಿ ಲ್ಯಾಬ್ ನಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗಲಿರುವುದು ಪತ್ತೆಯಾಗಿದೆ. ಗೂಡ್ಸ್ ಟ್ರಕ್ ನಲ್ಲಿ ಬಂದಿದ್ದ ಈ ವ್ಯಕ್ತಿ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರಿದ್ದರು. ನಾಲ್ಕು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದು ಚೆಕ್ ಪೋಸ್ಟ್ ದಾಟುವಾಗ ಪಾಸ್ ಹೊಂದಿರಲಿಲ್ಲ.
ಸಾಮಾನ್ಯವಾಗಿ ಗೂಡ್ಸ್ ರೈಲುಗಳ ಚಾಲಕರು ಮತ್ತು ಕ್ಲೀನರ್ ಗಳು ಚೆಕ್ ಪಾಯಿಂಟ್ ಗಳಲ್ಲಿ ನಿಗದಿತ ತಪಾಸಣೆಗೆ ಒಳಪಡುತ್ತಾರೆ, ಇದು ದೇಶದೆಲ್ಲೆಡೆ ಇರುವ ನಿಯಮ, ಇದೀಗ ಆ ಕೊರೋನಾ ಸೋಂಕಿತನ ಮಾಹಿತಿ ಮೂಲಕ ಆತನನ್ನು ಸಂಪರ್ಕಿಸಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಅವರ ಫೋನ್ ಕಾಲ್ ಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತಿಳಿಸಿದ್ದಾರೆ.
ಚೆಕ್ ಪೋಸ್ಟ್ ಗಳನ್ನು ತಪ್ಪಿಸಿಕೊಂಡು ಹೋಗುವವರ ಬಗ್ಗೆ ನಿಜಕ್ಕೂ ಆತಂಕವಿದೆ. ಅಧಿಕಾರಿಗಳ ಕಣ್ತಪ್ಪಿಸಿ ಹೋಗಿ ಕೊರೋನಾ ಹರಡಬಹುದು ಎಂಬ ಭೀತಿಯಿದೆ. ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವವರ ಬಗ್ಗೆ ಯಾರಾದರೂ, ಅಕ್ಕಪಕ್ಕದವರು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಈ ವ್ಯಕ್ತಿ ಜೊತೆ ಸಂಪರ್ಕಿಸಿದ ಏಳು ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಈತ ಗಲ್ಫ್ ದೇಶದಲ್ಲಿ ಉದ್ಯಮಿಯಾಗಿದ್ದು ಕೆಲ ದಿನಗಳ ಹಿಂದೆ ದೆಹಲಿಗೆ ಬಂದಿದ್ದರು. ಹರ್ಯಾಣ, ಮಹಾರಾಷ್ಟ್ರ, ಹೈದಾರಾಬಾದ್, ಬೆಂಗಳೂರು ಮೂಲಕ ಬರುವಾಗ ಹಲವು ವಾಹನಗಳನ್ನು ಬದಲಿಸಿ ಬಂದಿದ್ದರು. ಸಂಬಂಧಪಟ್ಟ ರಾಜ್ಯಗಳಿಗೆ, ಜಿಲ್ಲೆಗಳಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧು ರೂಪಾ ತಿಳಿಸಿದ್ದಾರೆ.
Advertisement