ಬೆಂಗಳೂರು: ನಗರದ ಕೇಂದ್ರ ಕಾರಾಗೃಹದಲ್ಲಿರುವ ಪಾತಕಿ ರವಿ ಪೂಜಾರಿಯನ್ನು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ಯುವುದಾದರೆ ಆತನ ಜೀವ ರಕ್ಷಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ಮುಂಬೈ ಪೊಲೀಸರಿಗೆ ಸೂಚನೆ ನೀಡಿದೆ.
ಮುಂಬೈ ಪೊಲೀಸರ ವಶಕ್ಕೆ ತಮ್ಮನ್ನು ವಿಚಾರಣೆಗಾಗಿ ಒಪ್ಪಿಸಲು ಅನುಮತಿ ನೀಡಿರುವ ನಗರದ ಸೆಷನ್ಸ್ ಕೋರ್ಟ್ ಆದೇಶ ರದ್ದಿಗೆ ಕೋರಿ ರವಿ ಪೂಜಾರಿ ಹೈಕೋರ್ಟ್'ಗೆ ತಕರಾರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ರವಿ ಪೂಜಾರಿಯನ್ನು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ದರೆ ಆತನ ಜೀವ ರಕ್ಷಣೆಗೆ ಎಲ್ಲಾ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ಮುಂಬೈನ ಎಂಸಿಓಸಿ-ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಬೆಂಗಲೂರು ಕೇಂದ್ರ ಕಾರಾಗೃಹಕ್ಕೆ ಕರೆತಂದು ಬಿಡಬೇಕು ಎಂದು ಮುಂಬೈ ಡಿಸಿಬಿ-ಸಿಐಡಿ ಪೊಲೀಸ್ ಇನ್ಸ್'ಪೆಕ್ಟರ್ ಅಜಯ್ ಸಾವಂತ್'ಗೆ ನಿರ್ದೇಶಿಸಿತು.
ಜೊತೆಗೆ ಪ್ರತಿವಾದಿಗಳಾಗಿರುವ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದರು. ಹಾಗೆಯೇ, ಮಹಾರಾಷ್ಟ್ರ ಸರ್ಕಾರ, ಮುಂಬೈ ನಗರ ಪೊಲೀಸ್ ಆಯುಕ್ತರು, ಡಿಸಿಬಿ-ಸಿಐಡಿ ಆಯುಕ್ತರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.27ಕ್ಕೆ ಮುಂದೂಡಿತು.
13 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಶಬನಮ್ ಡೆವಲಪರ್ಸ್ ಉದ್ಯೋಗಿಗಳಾದ ರವಿ ಹಾಗೂ ಶೈಲಜಾ ಅವರ ಜೋಡಿ ಕೊಲೆ ಪ್ರಕರಣದಲ್ಲಿ ರವಿ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಇತ್ತೀಚೆಗೆ ವಿದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಸದ್ಯ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ವಿಚಾರಣೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿ ನ.13ರಂದು ಬೆಂಗಳೂರಿನ 62ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿತ್ತು.
Advertisement