ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತೀ ವಾರ 5 ಕ್ವಿಂಟಾಲ್ ನಿರ್ಬಂಧಿತ ವಸ್ತುಗಳ ವಶ
ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರು ತಿಳುವಳಿಕೆ ಇಲ್ಲದೇ ತಮ್ಮ ಕೈ ಬ್ಯಾಗ್'ಗಳಲ್ಲಿ ನಿರ್ಬಂಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದರಿಂದ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತೀವಾರ ಸುಮಾರು ಐದು ಕ್ವಿಂಟಾಲ್'ಗೂ ಅಧಿಕ ನಿರ್ಬಂಧಿತ ವಸ್ತುಗಳು ಸಂಗ್ರಹವಾಗುತ್ತಿದೆ ಎಂದು ತಿಳಿದುಬಂದಿದೆ.
ಈ ನಿರ್ಬಂಧಿತ ವಸ್ತುಗಳ ಪೈಕಿ ಹ್ಯಾಂಡ್ ಟೂಲ್, ಬ್ಲೇಡ್, ಲೈಟರ್, ತೆಂಗಿನಕಾಯಿ, ಟಾಯ್'ಗನ್, ತುಪ್ಪದ ಪ್ಯಾಕೆಜಟ್, ಮಸಾಲೆ ಪದಾರ್ಥಗಳ ಸಂಗ್ರಹವೇ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನ ನಿಲ್ದಾಣದ ಭದ್ರತಾ ತಂಡ ಪ್ರಯಾಣಿಕರ ತಪಾಸಣೆ ವೇಳೆ ಪ್ರತಿ ವಾರ ಸುಮಾರು 5 ಕ್ವಿಂಟಾಲ್'ಗೂ ಅಧಿಕ ನಿರ್ಬಂಧಿತ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಪ್ರತಿ ಬ್ಯಾಗೇಜ್'ಗಳನ್ನು ಭದ್ರತಾ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸುವುದರಿಂದ ಇಂತಹ ವಸ್ತುಗಳನ್ನು ತಂದಾಗ ಹೆಚ್ಚು ಸಮಯ ವ್ಯಯವಾಗುತ್ತದೆ. ತುಪ್ಪದ ಪ್ಯಾಕೆಟ್, ಮಸಾಲೆ ಪದಾರ್ಥ ಇತ್ಯಾದಿ ಸೇವಿಸುವ ಪದಾರ್ಥಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಲಗೇಜ್ ನಲ್ಲಿ ಇರಿಸಿ ಕೊಂಡೊಯ್ಯಬಹುದು. ಆದರೆ, ವಿಮಾನದೊಳಗೆ ಪ್ರಯಾಣಿಕರು ಜೊತೆಯಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ಆದರೂ ಪ್ರಯಾಣಿಕರು ಕೈಬ್ಯಾಗ್'ಗಳಲ್ಲಿ ಇಂತಹ ಸಾಮಾಗ್ರಿಗಳನ್ನು ಇರಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುತ್ತಾರೆ.
ಈ ನಿರ್ಬಂಧಿತ ವಸ್ತುಗಳ ಬಗ್ಗೆ ತಿಳಿವಳಿಕೆ ಇಳಿಲದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ವಿಮಾನ ಪ್ರಯಾಣದ ವೇಳೆ ಲೈಟರ್, ಕತ್ತರಿ, ಟಾಯ್ ವೆಪನ್, ಚೂಪಾದ ಲೋಹದ ವಸ್ತುಗಳು, ಕ್ರೀಡಾವಸ್ತುಗಳು, ಗನ್, ಫೈರ್ ಆರ್ಮ್'ಗಳು ಆತ್ಮರಕ್ಷಣೆ ಉಪಕರಣಗಳು, ಸ್ಫೋಟಕಗಳು, ದಹನಶೀಲ ವಸ್ತುಗಳು, ರಾಸಾಯನಿಕಗಳು ಸೇರಿದಂತೆ ಹಲವು ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಇನ್ನು ಮುಂದೆ ಇಂತಹ ನಿರ್ಬಂಧಿತ ವಸ್ತುಗಳನ್ನು ತರಬಾರದು ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಏರ್'ಪೋರ್ಟ್ ಲಿಮಿಟೆಡ್ ಮನವಿ ಮಾಡಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ