ಬೆಂಗಳೂರು: ದೇಶದ ಟ್ರಿಲಿಯನ್ ಡಾಲರ್ ಆರ್ಥಿಕ ಪ್ರಗತಿಯ ಗುರಿಯಲ್ಲಿ ರಾಜ್ಯ ಮಾಹಿತಿ ತಂತ್ರಜ್ಞಾನ ಉದ್ಯಮದಿಂದ ಶೇ. 30 ರಷ್ಟು ಕೊಡುಗೆ ನೀಡುವ ಉದ್ದೇಶದ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು 2020-2025ನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಬೆಂಗಳೂರು ಹೊರಗಡೆ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ರಿಯಾಯಿತಿ ಪ್ರಕಟಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಹೊರಗಿನ ವಲಯಗಳಲ್ಲಿ ಪರಿಸರ ಸ್ನೇಹಿ ಸೌಕರ್ಯದೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ನೂತನ ಕೈಗಾರಿಕಾ ನೀತಿಯಲ್ಲಿ ಹೊಂದಲಾಗಿದೆ.
ಚೀನಾದ ಹೊರಬಂದ ಕೈಗಾರಿಕೆಗಳನ್ನು ಆಕರ್ಷಿಸಲು ವಿದ್ಯುನ್ಮಾನ ವಿನ್ಯಾಸದ ವ್ಯವಸ್ಥೆ ಮತ್ತು ತಯಾರಿಕಾ ವಲಯದಲ್ಲಿ ವಿಶೇಷ ರಿಯಾಯಿತಿ ಯೋಜನೆಯೊಂದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕೈಗಾರಿಕಾ ವಲಯದಲ್ಲಿ ಬೆಂಗಳೂರಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಿದ್ದು, ಇದೀಗ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಗಮನ ಹರಿಸಲಾಗಿದೆ. ಪ್ರಸ್ತುತ 30ರಿಂದ 32 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಇದನ್ನು 60 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಐಟಿ , ಬಿಟಿ ಮತ್ತು ವಿಜ್ಞಾನ, ತಂತ್ರಜ್ಞಾನ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಹೇಳಿದ್ದಾರೆ.
ನೂತನ ಕೈಗಾರಿಕೆ ನೀತಿಯಡಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯನ್ನು ಹೊರತುಪಡಿಸಿ ವಲಯ-3ರಲ್ಲಿ ಐಟಿ ಹಬ್ ಮತ್ತು ಕ್ಲಸ್ಟರ್ ನಿರ್ಮಾಣಕ್ಕೆ 3 ಕೋಟಿ ಆರ್ಥಿಕ ನೆರವು ಸೇರಿದಂತೆ ಜಾಗ ಅಥವಾ ಮೂಲಸೌಕರ್ಯ ಮತ್ತಿತರ ಕಾರ್ಯಕ್ಕೆ 2 ಕೋಟಿ ನೆರವು ನೀಡಲಾಗುವುದು, 2025ರೊಳಗೆ ಐಟಿ ಇಂಡ್ರಸ್ಟ್ರಿಯನ್ನು 52 ಬಿಲಿಯನ್ ಡಾಲರ್ ನಿಂದ 300 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ
ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಎಸ್ ಡಿಎಂ ವಲಯದಲ್ಲಿ 2 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಸ್ಟಾಂಪ್ ಮತ್ತು ವಿದ್ಯುತ್ ಶುಲ್ಕ ರಿಯಾಯಿತಿ ಹೊರತುಪಡಿಸಿದಂತೆ ಕೈಗಾರಿಕಾ ನೀತಿಯಡಿ ನೇರವಾಗಿ 102 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ ನಾರಾಯಣ ತಿಳಿಸಿದ್ದಾರೆ.
ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಮಂಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸ್ಟಾಂಪ್ ಕರ್ತವ್ಯದಲ್ಲಿ ಶೇ.75 ರಷ್ಟು ವಿನಾಯಿತಿ ನೀಡಲಾಗುವುದು, ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರ ವಲಯದಲ್ಲಿ ಸ್ಟಾಂಪ್ ಕರ್ತವ್ಯ ಸಂಪೂರ್ಣ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
Advertisement