ಬೆಂಗಳೂರು: ಕೊರೋನಾ ಸೋಂಕಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣದಿಂದ 1 ಲಕ್ಷ ರೂ. ದೇಣಿಗೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಬಗ್ಗೆ ದೇವೇಗೌಡ ಅವರಿಗೆ ಬರೆದ ಪತ್ರದಲ್ಲಿ ಯಡಿಯೂರಪ್ಪ, ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಬಹಳಷ್ಟು ತೊಂದರೆಯುಂಟಾಗಿದೆ. ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಲು, ಕೊರೋನಾ ಶಂಕಿತರಿಗೆ ಪರೀಕ್ಷೆಗಳನ್ನು ಮಾಡಿಸುವುದು ಮತ್ತು ಕೊರೋನಾ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡುವುದು, ಸ್ವಚ್ಛತೆ ಕಾಪಾಡುವುದು ಮತ್ತು ಲಾಕ್ಡೌನ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರವು ಪ್ರಾಮಾಣಿಕವಾಗಿ ಎಲ್ಲಾ ರಿತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಾವು ನೀಡಿರುವ 1 ಲಕ್ಷ ರೂ. ಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ನೆರವಾಗಲೆಂದು ತಾವು ಸ್ಪಂದಿಸಿರುವುದು ಹಾಗೂ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಎಲ್ಲಾ ಸದಸ್ಯರಿಗೆ ಎಲ್ಲಾ ರೀತಿಯಿಂದಲೂ ಬೆಂಬಲಿಸುವಂತೆ ಸೂಚನೆ ನೀಡಿರುವುದು ಮಾನವೀಯ ಔದಾರ್ಯವೆಂದು ಭಾವಿಸಿದ್ದೇನೆ. ಮಾನವೀಯ ನೆಲೆಯಲ್ಲಿ ತಾವು ನೀಡಿರುವ ಸಹಕಾರ ನಿರಂತರವಾಗಿ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ ತಮ್ಮ ಈ ಉದಾರವಾದ ದೇಣಿಗೆಗಾಗಿ ಸರ್ಕಾರದ ಪರವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ
ಇನ್ನು ದೇವೇಗೌಡ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ದೇವೇಗೌಡರ ಕಾರ್ಯ ಇತರರಿಗೆ ಮಾದರಿ ಎಂದು ಹೇಳಿದ್ದಾರೆ,
Advertisement