ಬೆಂಗಳೂರು: ಕೊರೋನಾವೈರಸ್ ಕಾರಣದಿಂದಾಗಿ ದೇಶಾದ್ಯಂತ ಪ್ರಯಾಣಿಕರ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಭಾರತೀಯ ರೈಲು ತೀವ್ರ ತರವಾದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದು, ರಾಜ್ಯದಲ್ಲಿನ ಮಹತ್ತರ ಏಕಪಥ ಹಳಿ ಯೋಜನೆಗಳಿಗೆ ಆರ್ಥಿಕ ಅಡಚಣೆ ಉಂಟಾಗಿದೆ.
ಅನೇಕ ಯೋಜನೆಗಳಿಗೆ ರಾಜ್ಯಗಳಿಂದ ಬರಬೇಕಿದ್ದ ಶೇ. 50 ರಷ್ಟು ಅನುದಾನ ಕೂಡಾ ಬಾರದೆ ಹಲವು ಯೋಜನೆಗಳು ಕಾಮಗಾರಿ ವಿಳಂಬವಾಗುತ್ತಿದೆ. ಭಾರತೀಯ ರೈಲ್ವೆ ಮಂಡಳಿಯಿಂದ ಈ ಯೋಜನೆಗಳಿಗೆ ಮಂಜೂರಾತಿ ದೊರೆತಿದೆ ಆದರೆ, ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು, ರಾಜ್ಯದಲ್ಲಿ ನಡೆಯುತ್ತಿರುವ ದ್ವಿಪಥ ಹಳಿ ಯೋಜನೆಗಳಿಗೆ ಈಗಾಗಲೇ ಸೂಕ್ತ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳಿಗೆ ಏನು ತೊಂದರೆಯಿಲ್ಲ, ಆದರೆ ಪ್ರಗತಿಯಲ್ಲಿರುವ ಏಕಪಥ ಯೋಜನೆಗಳಿಗೆ ತೊಂದರೆ ಉಂಟಾಗಿದೆ ಎಂದರು.
ಅನೇಕ ಯೋಜನೆಗಳು ಮುಗಿಯುವ ಹಂತದಲ್ಲಿವೆ ಆದರೆ, ಹಣ ಬಾರದೆ ಮುಂದಿನ ಕೆಲಸವನ್ನು ಕೈಗೆತ್ತಿಕೊಳ್ಳಲು ಆಗದು ಎಂದು ಅವರು ಹೇಳುತ್ತಾರೆ. ಆರ್ಥಿಕ ಅಡಚಣೆ ಪರಿಣಾಮ ಕೆಲವು ಪ್ರಮುಖ ಹೊಸ ಮಾರ್ಗದ ಯೋಜನೆಗಳು ಸ್ಥಗಿತಗೊಳ್ಳುವಂತಾಗಿವೆ.
ಅಂತಹ ಪ್ರಮುಖ ಯೋಜನೆಗಳೆಂದರೆ ಗದಗ- ವಾಡಿ (257 ಕಿ.ಮೀ) ಕೊಲಾರ- ಮುಳಬಾಗಿಲು- ಮಾದಾಘಟ್ಟ (50 ಕಿಮಿ) ಗಿನಿಗೆರೆ-ರಾಯಚೂರು (165 ಕಿಮಿ) ತುಮಕೂರು - ಚಿತ್ರದುರ್ಗ-ದಾವಣಗೆರೆ ( 191 ಕಿಮೀ) ರಾಯದುರ್ಗ- ತುಮಕೂರು (207 ಕಿಮಿ) ಗದೂರು-ಚಿಕ್ಕಮಗಳೂರು- ಸಕಲೇಶಪುರ (66 ಕಿ.ಮೀ) ಬಾಗಲಕೋಟೆ- ಕುಡಚಿ (142 ಕಿ.ಮೀ) ಶಿವಮೊಗ್ಗ- ಶಿಕಾರಿಪುರ- ರಾಯಪುರ (89 ಕಿ.ಮೀ)
ಲಕ್ಷಾಂತರ ಪ್ರಯಾಣಿಕರಿಂದ ಬರುವ ಆದಾಯದಿಂದ ರೈಲ್ವೆಗೆ ಹೆಚ್ಚಿನ ಹಣ ಬರುತ್ತದೆ. ಆದರೆ, ಲಾಕ್ ಡೌನ್ ನಿಂದಾಗಿ ಎಲ್ಲ ರೈಲುಗಳು ಸ್ಥಗಿತಗೊಂಡಿದ್ದು, ಆದಾಯದ ಮೇಲೆ ಹೊಡೆತ ಬಿದ್ದಿದೆ. ರಾಜ್ಯವು ಎಲ್ಲಾ ಯೋಜನೆಗಳಿಗೆ ಉಚಿತವಾಗಿ ಭೂಮಿಯನ್ನು ಒದಗಿಸುತ್ತದೆ ಆದರೆ ಆದಾಯದ ಹೊಡೆತದಿಂದಾಗಿ ಮೂಲಸೌಕರ್ಯ ಯೋಜನೆಗಳಿಗೆ ರಾಜ್ಯಸರ್ಕಾರ ಎಷ್ಟು ಹಣವನ್ನು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement