ಬೆಂಗಳೂರು: ಮಾಸ್ಕ್ ಗಳನ್ನು ಯಾವಾಗ ಧರಿಸಬೇಕು ಎಂಬ ಬಗ್ಗೆ ಜನರಲ್ಲಿ ಗೊಂದಲ ಹೆಚ್ಚಾಗುತ್ತಿರುವುದರಿಂದ ಮತ್ತು ಮಾರ್ಷಲ್ಗಳು ದಂಡ ವಿಧಿಸುತ್ತಿರುವುದರಿಂದ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ಗೆ ಸ್ಪಷ್ಟತೆ ಕೋರಿ ಪತ್ರ ಬರೆದಿದ್ದಾರೆ.
ನಗರದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದರಿಂದ ಯಾವುದೇ ವಿನಾಯಿತಿ ನೀಡಿಲ್ಲ. ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಮಾಸ್ಕ್ ಧರಿಸುವ ಕುರಿತು ವಿನಾಯಿತಿ ನೀಡಲಾಗಿದೆ ಎಂಬ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಯುಕ್ತರು, ನಗರದಲ್ಲಿ ವಾಯುವಿಹಾರ ಮಾಡುವಾಗ, ಕಾರು ಹಾಗೂ ಬೈಕ್ ಚಾಲನೆ ವೇಳೆ ಮಾಸ್ಕ್ ಧರಿಸುವಂತಿಲ್ಲ ಎನ್ನುವ ವದಂತಿಗೆ ಕಿವಿಗೊಡಬೇಡಿ, ಈ ರೀತಿಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮನೆಯಿಂದ ಹೊರ ಬಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಪ್ಪಿದರೆ ದಂಡ ವಿಧಿಸುವ ನಿಯಮ ಈಗಲೂ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹಾಗೂ ಕಾರಿನಲ್ಲಿ ಹೋಗುವವರಿಗೆ ಮಾಸ್ಕ್ ಧರಿಸಲು ವಿನಾಯ್ತಿ ನೀಡಲಾಗಿದೆ ಎಂಬುದು ಸುಳ್ಳು. ಈ ರೀತಿಯ ಯಾವುದೇ ಆದೇಶವಾಗಿಲ್ಲ. ಮಾರ್ಷಲ್ಗಳು ದಂಡ ವಿಧಿಸಬಾರದು ಎಂದೂ ಆದೇಶ ಮಾಡಿಲ್ಲ ಎಂದು ವಿವರಿಸಿದ್ದಾರೆ.
ಬೆಳಗಿನ ವಾಯು ವಿಹಾರ ಮಾಡುವವರು ಮಾಸ್ಕ್ ಧರಿಸಿ ನಡಿದರೆ ಉಸಿರು ಕಟ್ಟಿದಂತೆ ಆಗಲಿದೆ. ಆದ್ದರಿಂದ ವಾಕಿಂಗ್ ಮಾಡುವಾಗ ಮಾಸ್ಕ್ ಧರಿಸುವುದರಿಂದ ವಿನಾಯ್ತಿ ನೀಡಬೇಕು, ಕಾರಿನಲ್ಲಿ ಹೋಗುವಾಗ ಗಾಜು ಮುಚ್ಚಿದ್ದರೂ ಮಾಸ್ಕ್ ಧರಿಸಬೇಕೇ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಸಂಬಂಧ ಟಾಸ್ಕ್ ಪೋರ್ಸ್ನ ತಜ್ಞರಿಂದ ವಿವರಣೆ
ಕೇಳಲಾಗಿತ್ತು. ಆದರೆ, ಯಾರಿಗೂ ವಿನಾಯಿತಿ ನೀಡಿಲ್ಲ ಎಂದು ಮಂಜುನಾಥ್ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ.
Advertisement