ಬೆಂಗಳೂರು: ಏಕಾಏಕಿ ವಾಲಿದ ನಾಲ್ಕು ಅಂತಸ್ತಿನ ಕಟ್ಟಡ; ತಪ್ಪಿದ ದುರಂತ

ಹೆಬ್ಬಾಳದ ಕೆಂಪಾಪುರದಲ್ಲಿರುವ ನಾಲ್ಕು ಅಂತಸ್ತಿನ ಪಿಜಿ ಕಟ್ಟಡ  ವಾಲಿದ್ದು ಕಟ್ಟಡದಲ್ಲಿದ್ದ 30 ಮಂದಿ ಸೇರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಗಿದೆ.
ವಾಲಿದ ಕಟ್ಟಡ
ವಾಲಿದ ಕಟ್ಟಡ

ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿರುವ ನಾಲ್ಕು ಅಂತಸ್ತಿನ ಪಿಜಿ ಕಟ್ಟಡ  ವಾಲಿದ್ದು ಕಟ್ಟಡದಲ್ಲಿದ್ದ 30 ಮಂದಿ ಸೇರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ವಾಲಿದ ಕಟ್ಟಡವನ್ನು ನೆಲಸಮ ಮಾಡಲು ತೀರ್ಮಾನಿಸಿದ್ದಾರೆ. 

ಘಟನೆಗೆ ಕಾರಣವಾದ ಸಮೀಪದ ನಿವೇಶನದ ಮಾಲೀಕ, ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

ಸುಮಾ ಪಬ್ಲಿಕ್ ಶಾಲೆ ಸಮೀಪದ ರಾಹುಲ್ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ತುಳಸಿ ಎಂಬವರು ‘ಹರ್ಷಿತ್’ ಹೆಸರಿನ ಪಿಜಿ ಕಟ್ಟಡ ನಡೆಸುತ್ತಿದ್ದರು. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿದ್ದ ಪಿ.ಜಿಯಲ್ಲಿ 30 ಮಂದಿ ಇದ್ದರು. 

ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಈ ಕಟ್ಟಡ ವಾಲಿದೆ. ಒಳಗಿದ್ದವರಿಗೆ ಕಟ್ಟಡ ವಾಲುತ್ತಿರುವ ಅನುಭವ ಆಗುತ್ತಿರುವ ಸಂದರ್ಭದಲ್ಲಿ ಸದ್ದು ಕೂಡ ಕೇಳಿಸಿದೆ. ತಕ್ಷಣ ಒಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. 

ಐದು ವರ್ಷದ ಹಿಂದೆ ಕಟ್ಟಿದ್ದ ಈ ಕಟ್ಟಡದ ಸಮೀಪದಲ್ಲಿ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು. ಅದಕ್ಕೆ ಪಾಯ ತೆಗೆದ ಪರಿಣಾಮ ಈ ಕಟ್ಟಡ ವಾಲಿದೆ. ನಿವೇಶನಕ್ಕೆ ಹೊಂದಿಕೊಂಡಿದ್ದ ಕಟ್ಟಡದ ಅಡಿಪಾಯಕ್ಕಿಂತ ಆಳವಾದ ಪಾಯ ತೋಡಿದ್ದರಿಂದ ನಿರ್ಮಾಣಗೊಂಡಿದ್ದ ಕಟ್ಟಡದ ಅಡಿಪಾಯ ಸಡಿಲವಾಗಿ‌ದೆ. ಪಕ್ಕದ ನಿವೇಶನ ಬಾಬು ಎಂಬುವರಿಗೆ ಸೇರಿದ್ದಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗದಂತೆ ವಾಲಿದ ಕಟ್ಟಡವನ್ನು ನೆಲಸಮ ಮಾಡಲು ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ

ವಿದ್ಯಾರ್ಥಿಗಳನ್ನು ಪಕ್ಕದ ದುರ್ಗಾ ಪಿ.ಜಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ‘ಹರ್ಷಿತ್’ ಪಿ.ಜಿ ನಡೆಸುತ್ತಿದ್ದ ತುಳಸಿ ಅವರೇ ದುರ್ಗಾ ಪಿ.ಜಿಯನ್ನೂ ನಡೆಸುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com