ಬೆಂಗಳೂರು: ತನ್ನ ಅತ್ತಿಗೆ ಜೊತೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆ, ಗುಂಡು ಹಾರಿಸಿ ಆರೋಪಿಗಳ ಬಂಧನ

ಯುವಕನೊಬ್ಬನನ್ನು ಎರಡು ದಿನಗಳ ಹಿಂದೆ ಕೊಲೆ ಮಾಡಿ ಮತ್ತೊಬ್ಬನ  ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು: ತನ್ನ ಅತ್ತಿಗೆ ಜೊತೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆ, ಗುಂಡು ಹಾರಿಸಿ ಆರೋಪಿಗಳ ಬಂಧನ
ಬೆಂಗಳೂರು: ತನ್ನ ಅತ್ತಿಗೆ ಜೊತೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆ, ಗುಂಡು ಹಾರಿಸಿ ಆರೋಪಿಗಳ ಬಂಧನ

ಬೆಂಗಳೂರು: ಯುವಕನೊಬ್ಬನನ್ನು ಎರಡು ದಿನಗಳ ಹಿಂದೆ ಕೊಲೆ ಮಾಡಿ ಮತ್ತೊಬ್ಬನ  ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಾಜಿನಗರ ಮಹಮ್ಮದ್ ರಿಜ್ವಾನ್  ಹಾಗೂ ದೇವರ ಜೀವನಹಳ್ಳಿಯ ಫರ್ವೇಜ್ ಅಹಮದ್‌ಗೆ ಗುಂಡೇಟಿನಿಂದ ಬಂಧನಕ್ಕೊಳಗಾದವರು. ಪೊಲೀಸರ ಗಂಡೇಟು ಎಡಗಾಲಿಗೆ ತಗಲಿರುವ ಮಹಮದ್  ರಿಜ್ವಾನ್ (25) ಹಾಗೂ ಬಲಗಾಲಿಗೆ ಗುಂಡೇಟು ತಗಲಿರುವ ಪರ್ವೇಜ್ ಅಹಮದ್ (26)  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ  ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಬ್ಬರನ್ನು ಬೆನ್ನಟ್ಟಿ ಬಂಧಿಸಲು ಹೋದ ಭಾರತೀನಗರದ ಮುಖ್ಯಪೇದೆ  ಮಜರ್ ಬೇಗ್‌ಗೆ ಆರೋಪಿಗಳು ನಡೆಸಿದ ಹಲ್ಲೆಯಿಂದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ. ಗುಂಡೇಟು ತಗುಲಿರುವ ಇಬ್ಬರ ಜೊತೆ ಕೊಲೆ ಹಾಗೂ ಹಲ್ಲೆ ಕೃತ್ಯದಲ್ಲಿ  ಭಾಗಿಯಾಗಿದ್ದ ಇನ್ನೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಮರ್ಷಿಯಲ್  ಸ್ಟ್ರೀಟ್‌ನ ಅಬ್ದುಲ್ ಮತೀನ್‌ನನ್ನು ಶಿವಾಜಿನಗರದ ಬಂಡಿಮಠದ ಬಳಿಯಿಂದ ಸ್ಯಾಂಟ್ರೋ  ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಬಾಗಲೂರಿನ ಹೆಣ್ಣೂರು ಮುಖ್ಯರಸ್ತೆಯ ನಿರ್ಜನ  ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ  ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪುಲಕೇಶಿನಗರದಲ್ಲಿ ಅಬು ಸೋಫಿಯಾನ್ (27) ಎಂಬಾತನ ಮೇಲೆ ಕಳೆದ ಜ.16 ರಂದು  ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಹಲ್ಲೆಯು ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಸೃಷ್ಟಿಯಾಗಿತ್ತು. ಈವೆರಡೂ ಪ್ರಕರಣಗಳನ್ನು  ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಶಿವಾಜಿನಗರ ಹಾಗೂ ಭಾರತಿನಗರ ಇನ್ಸ್‌ಪೆಕ್ಟರ್ ಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ತಂಡವು ಮಹಮದ್ ರಿಜ್ವಾನ್ ಹಾಗೂ ಪರ್ವೇಜ್ ಅಹಮದ್ ಕಲ್ಪಲ್ಲಿ ಸ್ಮಶಾನದ ಬಳಿ ನಂಬರ್ ಪ್ಲೇಟ್ ಇಲ್ಲದ  ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವುದನ್ನು ಭಾನುವಾರ ಮಧ್ಯರಾತ್ರಿ 2.30ರ ವೇಳೆ ಪತ್ತೆ  ಹಚ್ಚಿದೆ. ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು, ಬೈಕ್ ನಲ್ಲಿ ಹೋಗುತ್ತಿದ್ದಇಬ್ಬರನ್ನು ಅಡ್ಡಗಟ್ಟಿದೆ. ಈ  ವೇಳೆ ಭಾರತಿನಗರ ಮುಖ್ಯ ಪೇದೆ ಮಜರ್ ಬೇಗ್ ಮೇಲೆ  ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ರಮೇಶ್ ಅವರು  ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೆರಡು ಸುತ್ತು ಗುಂಡು ಹಾರಿಸಿದ್ದಾರೆ.

ಇವೆರಡೂ  ಗುಂಡುಗಳು ಇಬ್ಬರ ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಇಬ್ಬರನ್ನು  ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಮುಖ್ಯ ಪೇದೆ ಮಜರ್ ಬೇಗ್‌ಗೆ  ಚಿಕಿತ್ಸೆ ಕೊಡಿಸಲಾಗಿದೆ.

ವಿಚಾರಣೆಯಲ್ಲಿ ಗುಂಡೇಟು  ತಗಲಿರುವ ರಿಜ್ವಾನ್‌ನ ಅಣ್ಣ ಭಾರತಿನಗರದ ಇರ್ಷಾದ್‌ನ ಪತ್ನಿ ಜೊತೆ ಕೊಲೆಯಾದ ಅಬ್ದುಲ್  ಮತೀನ್ ಅನೈತಿಕ ಸಂಬಂಧ ಹೊಂದಿದ್ದ. ಗಾಂಜಾ ವ್ಯಸನಿಯಾಗಿದ್ದ ಮತೀನ್ ಸಣ್ಣ ಪುಟ್ಟ ಕೆಲಸ  ಮಾಡಿಕೊಂಡಿದ್ದು ಕಳೆದ ಡಿಸೆಂಬರ್‌ನಲ್ಲಿ ಗಾಂಜಾ ವಿಚಾರಕ್ಕೆ ಜಗಳ ಮಾಡಿಕೊಂಡು ಇರ್ಷಾದ್  ನನ್ನು ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ.

ಅಣ್ಣನ ಪತ್ನಿ ಜೊತೆ ಅನೈತಿಕ  ಸಂಬಂಧ ಹೊಂದಿದ್ದ ಮತೀನ್ ಗೆ ಹಲವು ಬಾರಿ ರಿಜ್ವಾನ್ ಎಚ್ಚರಿಕೆ ನೀಡಿದ್ದ. ಆದರೂ ಮತೀನ್  ಆಕೆಯಿಂದ ದೂರವಾಗಿರಲಿಲ್ಲ. ಇದಲ್ಲದೇ ಇವರಿಬ್ಬರ ಅನೈತಿಕ ಸಂಬಂಧಕ್ಕೆ ವಿವಾಹದ ಮೂಲಕ  ಅಂತ್ಯವಾಡಲು ಇರ್ಷಾದ್ ಪತ್ನಿಯ ಅಣ್ಣ ಅಬೂ ಸುಫಿಯಾನ್ ಮುಂದಾಗಿರುವುದು ರಿಜ್ವಾನ್  ಆಕ್ರೋಶಗೊಳ್ಳುವಂತೆ ಮಾಡಿತ್ತು. ಇವರಿಬ್ಬರನ್ನು ಮುಗಿಸಲು ಸಂಚು ರೂಪಿಸಿದ್ದ  ರಿಜ್ವಾನ್, ಪರ್ವೇಜ್ ಸೇರಿ 7 ಮಂದಿಯ ಜೊತೆ ಸಂಚು ರೂಪಿಸಿ ಮೊದಲಿಗೆ ಅಬೂ ಸೂಫಿಯಾನ್  ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಮತೀನ್ ನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇವರಿಬ್ಬರು ಗುಂಡೇಟು ತಗುಲಿರುವವರ ಜೊತೆ ಮಹಮ್ಮದ್ ಸಫಾನ್  (24) ಮಹಮದ್ ತಂಜಿಲ್ (26), ಸೈಯದ್ ಆಲಿ (24) ಯಾಸೀನ್ ಖಾನ್ (25) ಹಾಗೂ ಶಾಹೀದ್ (26) ಎಂಬವರನ್ನು ಬಂಧಿಸಲಾಗಿದೆ. 

ಗುಂಡೇಟು ತಗಲಿರುವ ಮಹಮ್ಮದ್ ರಿಜ್ವಾನ್ ಭಾರತೀನಗರದಲ್ಲಿ ಒಂದು ಕೊಲೆ ಯತ್ನ, ಒಂದು ಅಪಹರಣ,  ಶಿವಾಜಿನಗರದಲ್ಲಿ ಕೊಲೆ ಸೇರಿದಂತೆ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.  ಪರ್ವೇಜ್ ಅಹಮದ್ ಡಿ.ಜೆ. ಹಳ್ಳಿಯಲ್ಲಿ 2 ಕೊಲೆ ಯತ್ನ, ಬೆದರಿಕೆ, ಶಿವಾಜಿನಗರದಲ್ಲಿ ಒಂದು ಕೊಲೆ ಸೇರಿ ನಾಲ್ಕು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com