ಬೆಂಗಳೂರು: ಮೊಮ್ಮಗನ ಹುಟ್ಟಿದ ದಿನ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ರೈಲ್ವೇ ಅಧಿಕಾರಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಘಟನೆ ನಡೆದಿದೆ.
ಬೆಂಗಳೂರು ರೈಲ್ವೇ ವಿಭಾಗದಲ್ಲಿ ಸೀನಿಯರ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಮೊಮ್ಮಗನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರೈಲ್ವೇ ಸಿಬ್ಬಂದಿಗಳಿರುವ ಕ್ವಾಟ್ರಸ್ ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮಾಡಿದ ಎರಡು ದಿನಗಳಲ್ಲಿಯೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಇದರ ಜೊತೆಗೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತಿಬ್ಬರು ನೌಕರರಲ್ಲಿಯೂ ವೈರಸ್ ದೃಡಪಟ್ಟಿದೆ.
ಅಧಿಕಾರಿ ಬೇಜವಾಬ್ದಾರಿತನದಿಂದ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮೊಮ್ಮಗನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಭಾನುವಾರ ಪಾರ್ಟಿ ಮಾಡಲಾಗಿದೆ. ಕ್ವಾಟ್ರಸ್ ನಲ್ಲಿ ಒಟ್ಟು 140 ಮನೆಗಳಿದ್ದು, ಅದೃಷ್ಟವಶಾತ್ ಯಾರೊಬ್ಬರು ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ. ಹೊರಗಿನಿಂದ ಬಂದಿದ್ದ ಅವರ ಸಂಬಂಧಿಕರಷ್ಟೇ ಪಾಲ್ಗೊಂಡಿದ್ದಾರೆ. ಪಾರ್ಟಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ರೈಲ್ವೇ ಇಲಾಖೆಯ ಅಧಿಕಾರಿ ಆಸೀಫ್ ಹಫೀಜ್ ಅವರು ಹೇಳಿದ್ದಾರೆ.
ಬಿಬಿಎಂಪಿ ಆದೇಶದ ಪ್ರಕಾರ ಯಾವುದೇ ತುರ್ತು ಪರಿಸ್ಥಿತಿಯಾದರೂ ಕೇವಲ 50 ಜನರಷ್ಟ ಒಗ್ಗೂಡಬಹುದಾಗಿದೆ. ಆದರೆ, ಅಧಿಕಾರಿ ಆದೇಶವನ್ನು ಉಲ್ಲಂಘಿಸಿದ್ದಾರೆ. ಪಾರ್ಟಿ ನಡೆಸುವ ಕುರಿತು ಇಲಾಖೆಯಿಂದಲೂ ಅವರು ಅನುಮತಿ ಪಡೆದಿಲ್ಲ. ಪಾರ್ಟಿ ಬಗ್ಗೆಯೂ ಯಾರೊಬ್ಬರಿಗೂ ಮಾಹಿತಿ ಇರಲಿಲ್ಲ. ಬರ್ತ್ ಡೇ ಪಾರ್ಟಿ ತುರ್ತು ಪರಿಸ್ಥಿತಿಯಲ್ಲ. ಪಾರ್ಟಿಯಲ್ಲಿ ಸಾಕಷ್ಟು ಮಕ್ಕಳು ಪಾಲ್ಗೊಂಡಿದ್ದರು. ಸೂಕ್ಷ್ಮತೆ ಇಲ್ಲದೆ ಅಧಿಕಾರಿಯ ಕುಟುಂಬ ವರ್ತನೆ ತೋರಿದೆ ಎಂದು ನೌಕರರೊಬ್ಬರು ಹೇಳಿದ್ದಾರೆ.
ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರಲ್ಲೂ ವೈರಸ್ ದೃಢಪಟ್ಟಿದೆ. ಇದಲ್ಲದೆ, ಇವರೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ 20 ಮಂದಿಯಲ್ಲೂ ವೈರಸ್ ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದು, ಒಬ್ಬ ಬೆಂಗಳೂರು ಹಾಗೂ ಮತ್ತೊಬ್ಬ ಬಾಗಲಕೋಟೆ ಮೂಲದವರಾಗಿದ್ದಾರೆ.
Advertisement