ಕೊರೋನಾ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸರ್ಕಾರ ಚಿಂತನೆ

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಚಿಂತನೆ ಇದ್ದು, ಈ ಸಂಬಂಧ ಕ್ರಿಯಾಪಡೆ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು‌ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ (ಸಂಗ್ರಹ ಚಿತ್ರ)
ವಿಕ್ಟೋರಿಯಾ ಆಸ್ಪತ್ರೆ (ಸಂಗ್ರಹ ಚಿತ್ರ)

ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಚಿಂತನೆ ಇದ್ದು, ಈ ಸಂಬಂಧ ಕ್ರಿಯಾಪಡೆ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು‌ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ‌ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2000 ಹಾಸಿಗೆಗಳಿವೆ, ಕೆ.ಸಿ ಜನರಲ್ ಆಸ್ಪತ್ರೆ 400, ಜಯನಗರ ಆಸ್ಪತ್ರೆ 400, ಕಿಮ್ಸ್ 1000 ಹಾಸಿಗೆಗಳು ಸಿಗುತ್ತವೆ ಅವೆಲ್ಲವನ್ನೂ ಅವಶ್ಯವಿದ್ದರೆ ಕೋವಿಡ್ 19ಗೆ ಬಳಸಲಾಗುತ್ತದೆ. ಬೇರೆ ಬೇರೆ ಕಡೆ ಇರುವ ರೋಗಿಗಳನ್ನು ಒಂದೇ ಕಡೆ ಇರಿಸಿ ಚಿಕಿತ್ಸೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ರೋಗಿಗಳನ್ನು ಇತರೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಿ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಇವತ್ತು ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

10 ಸಾವಿರ ರೋಗಿಗಳ ಕೊರೋನಾ ವರದಿ ಪಾಸಿಟಿವ್ ಬಂದರೂ ಅದನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿಯೇ ವ್ಯವಸ್ಥೆ ಮಾಡಬಹುದಾಗಿದೆ. ಸಧ್ಯ ನಮಗೆ ಹಾಸಿಗೆ ಸಮಸ್ಯೆ ಇಲ್ಲ ಎಂದರು.

ಇದುವರಗೆ 1,22,533 ಜನರನ್ನು ಏರ್ಪೋರ್ಟಿನಲ್ಲಿ ಪರೀಕ್ಷೆ ಮಾಡಲಾಗಿದೆ.1,40,000 ಜನರನ್ನು ಬಂದರಿನಲ್ಲಿ ತಪಾಸಣೆ ಮಾಡಲಾಗಿದೆ. 1,143 ಜನರಿಗೆ ಇದುವರಗೆ ರಕ್ತ ಮತ್ತು ಕಫದ ಪರೀಕ್ಷೆ ಮಾಡಲಾಗಿದೆ. ನಿನ್ನೆ ಟಾಸ್ಕ್ ಫೋರ್ಸ್ ನಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ ಎಂದರು.

15 ಪಾಸಿಟಿವ್ ಪ್ರಕರಣಗಳು ಇವೆ, ಅವರಲ್ಲಿ 5 ಜನ ಗುಣಮುಖರಾಗ್ತಿದ್ದಾರೆ, ಅವರಲ್ಲಿ‌ 2 ಜನ ಇಂದು ಆಸ್ಪತ್ರೆಗಳಿಂದ ಮನೆಗೆ ಮರಳುತ್ತಿದ್ದಾರೆ. ಹಾಗಾಗಿ ಜನರು ಆತಂಕಕ್ಕೆ ಸಿಲುಕಬಾರದು. ಖಾಯಿಲೆ ಗುಣವಾಗುವ ವಿಶ್ವಾಸವ ಹೊಂದಿ ಎಂದು ಕರೆ ನೀಡಿದರು.

ಹೆಚ್ಚುವರಿಯಾಗಿ ಸುಮಾರು 10 ಸಾವಿರ ಜನರನ್ನು ಕೊರೋನಾ ಕ್ವಾರಂಟೈನ್ ಗೆ ಬಳಕೆ ಮಾಡಲಾಗುತ್ತದೆ, ಎನ್ ಎಸ್ ಎಸ್,ಎನ್ ಸಿಸಿ, ಎನ್ ಜಿ ಒ, ಮುಂತಾದ ಸ್ವಯಂಸೇವಾ ಸಂಸ್ಥೆಗಳನ್ನು ಹೋಮ್‌ ಕ್ವಾರಂಟೈನ್ ಗೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಕೂಡಾ ಆಸಕ್ತಿ ಇದ್ದರೆ ಬಂದು ಇವರೊಂದಿಗೆ ಸೇರಬಹುದು. ಆದರೆ ಇದರಲ್ಲಿ ಹಿರಿಯ ನಾಗರಿಕರನ್ನು ಬಳಸೋದಿಲ್ಲ. ಎಲ್ಲರಿಗೂ ಕಡ್ಡಾಯ ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಟಾಸ್ಕ್ ಫೋರ್ಸ್ ನಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com