ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಕೆಲವರು ರಸ್ತೆಗಿಳಿದು ಓಡಾಡುತ್ತಿರುವುದು ಕಂಡುಬರುತ್ತಿದೆ.ಪೊಲೀಸರು ಜನರಿಗೆ ಬಾಯಿಮಾತಿನಲ್ಲಿ ಹೇಳಿದ್ದು ಸಾಕಾಗದೆ ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿದ್ದಾರೆ.ಲಾಕ್ ಡೌನ್ ಉಲ್ಲಂಘಿಸಿ ಯುಗಾದಿಗೆಂದು ಕೆಲವು ಜಿಲ್ಲೆಗಳಲ್ಲಿ ತರಕಾರಿ, ಹೂವು-ಹಣ್ಣು ಖರೀದಿಗಿಳಿದ ಜನರಿಗೆ ಪೊಲೀಸರು ಲಾಠಿಪ್ರಹಾಯ ನಡೆಸಿದ್ದು ವರದಿಯಾಗಿದೆ.
ಬೆಂಗಳೂರು ನಗರಕ್ಕೆ ಬರುತ್ತಿರುವ ಮತ್ತು ನಗರದಿಂದ ಹೊರಹೋಗುತ್ತಿರುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಗಡಿಭಾಗಗಳಲ್ಲಿ ಮತ್ತು ಬೆಂಗಳೂರು ನಗರ ಸುತ್ತಮುತ್ತ ನಾಕಾಬಂದಿ ಹಾಕಲಾಗಿದೆ.
ನಿನ್ನೆ ಬೆಂಗಳೂರು ನಗರದಲ್ಲಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ರಸ್ತೆಗಿಳಿದವರ ವಿರುದ್ಧ, ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮಾತನಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ರಾಜ್ಯದ ಕೆಲವು ಕಡೆಗಳಲ್ಲಿ ಬಾಯಿಮಾತಿನಲ್ಲಿ ಹೇಳಿದ್ದಕ್ಕೆ ಅರ್ಥಮಾಡಿಕೊಳ್ಳದ್ದಕ್ಕೆ ಲಾಠಿಚಾರ್ಜ್ ಮೂಲಕ ಅನಿವಾರ್ಯವಾಗಿ ಪೊಲೀಸರು ಕ್ರಮ ಕೈಗೊಂಡ ಘಟನೆಗಳು ನಡೆದಿವೆ. ಪೊಲೀಸರು ಅಲ್ಲಲ್ಲಿ ಬಂದು, ಪೊಲೀಸ್ ವಾಹನದಲ್ಲಿ ಓಡಾಡಿಕೊಂಡು ಮೈಕ್ ನಲ್ಲಿ ಮನೆಯಿಂದ ಹೊರಗೆ ಹೋಗಬೇಡಿ, ಒಳಗೇ ಕುಳಿತುಕೊಳ್ಳಿ ಎಂದು ಹೇಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ನಿನ್ನೆ ಯುಗಾದಿ ಹಬ್ಬ ಮುನ್ನಾದಿನ ಮತ್ತು ಇಂದು ಯುಗಾದಿ ಆಗಿರುವುದರಿಂದ ಜನರು ಮಾರುಕಟ್ಟೆಗೆ ತೆರಳಿ ಹೂವು, ಹಣ್ಣು, ತರಕಾರಿ ಖರೀದಿಸುವುದು ಕೂಡ ಕಂಡುಬಂದಿದೆ. ಹೊರಗೆ ಬಂದ ಜನರು ಮನೆಗೆ ಹಿಂತಿರುಗಲು ಪೊಲೀಸರು ಮಾನವಸಹಿತ ಚೆಕ್ ಪೋಸ್ಟ್ ಗಳನ್ನು ಕೆಲವು ಕಡೆಗಳಲ್ಲಿ ಸ್ಥಾಪಿಸಿದ್ದಾರೆ.
Advertisement