ರಾಜ್ಯದಲ್ಲಿ ಶಾಲಾ ದಾಖಲಾತಿಗಳು ಏಪ್ರಿಲ್ ೧೫ರ ವರೆಗೆ ಸ್ಥಗಿತ- ಸುರೇಶ್ ಕುಮಾರ್ 

ಕೊರೋನಾ ವೈರಸ್ ಬಿಕ್ಕಟ್ಟು ಕೊನೆಗೊಳ್ಳುವವರೆಗೂ ರಾಜ್ಯದ ಯಾವುದೇ ಶಾಲೆಗಳು ಹೊಸದಾಗಿ ದಾಖಲಾತಿ ಪ್ರಕ್ರಿಯೆ ಆರಂಭಿಸಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶನಿವಾರ ಹೇಳಿದ್ದಾರೆ
ಸಚಿವ ಎಸ್. ಸುರೇಶ್ ಕುಮಾರ್
ಸಚಿವ ಎಸ್. ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ವೈರಸ್ ಬಿಕ್ಕಟ್ಟು ಕೊನೆಗೊಳ್ಳುವವರೆಗೂ ರಾಜ್ಯದ ಯಾವುದೇ ಶಾಲೆಗಳು ಹೊಸದಾಗಿ ದಾಖಲಾತಿ ಪ್ರಕ್ರಿಯೆ ಆರಂಭಿಸಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶನಿವಾರ ಹೇಳಿದ್ದಾರೆ

ಕೋವಿಡ್ -೧೯ ಬಿಕ್ಕಟ್ಟು ಅಂತ್ಯಗೊಳ್ಳುವವರೆಗೆ ಯಾವುದೇ ಶಾಲೆಗಳು ದಾಖಲಾತಿ ಪ್ರಕ್ರಿಯೆ ಆರಂಭಿಸದಂತೆ ಸರ್ಕಾರ ಈಗಾಗಲೇ ಸಾಮಾನ್ಯ ಸೂಚನೆ ನೀಡಿದೆ. ಮಗುವನ್ನು ಉನ್ನತ ತರಗತಿಗೆ ದಾಖಲಿಸಿಕೊಳ್ಳುವುದಕ್ಕೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದಾರೆ

ಈ ಬಗ್ಗೆ ಗಮನಹರಿಸಿ, ಇಂತಹ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸಾಮಾಜಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಯಾವುದೇ ಪೋಷಕರು ಅನಗತ್ಯ ತೊಂದರೆ, ಕಿರುಕುಳಕ್ಕೆ ಒಳಗಾಗಬಾರದು. ಶಾಲಾ ಆಡಳಿತ ಮಂಡಳಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು.ಸರ್ಕಾರದ ಕಾಳಜಿಯನ್ನು ಶಾಲಾ ಆಡಳಿತ ಮಂಡಳಿಗಳು ಅರ್ಥಮಾಡಿಕೊಳ್ಳಲಿವೆ ಎಂಬ ಆಶಯವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ

ಕೊರೋನಾ ವೈರಸ್ ಹಿನ್ನಲೆಯಲ್ಲಿ ಮುಂದಿನ ಸೂಚನೆ ನೀಡುವವರೆಗೆ ಎಲ್ಲಾ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲು ಪ್ರಕ್ರಿಯೆಗಳನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ

ಮುಂದಿನ ಶೈಕ್ಷಣಿಕ ವರ್ಷದ ಶುಲ್ಕಗಳನ್ನು ಪಾವತಿಸುವಂತೆ ಹಲವು ಶಾಲೆಗಳು, ಮಕ್ಕಳ ಪೋಷಕರ ಮೊಬೈಲ್ ಗಳಿಗೆ ಸಂದೇಶ ರವಾನಿಸುತ್ತಿವೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ.ಹೊಸ ದಾಖಲಾತಿ ಮಾತ್ರವಲ್ಲದೆ, ಉನ್ನತ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳುವುದನ್ನು ಸಹ ಮುಂದಿನ ಆದೇಶದ ವರೆಗೆ ಮುಂದೂಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕೆಲ ಶಾಲೆಗಳು ಏಪ್ರಿಲ್ ನಲ್ಲಿ ಹೊಸದಾಖಲಾತಿಗಳಿಗಾಗಿ ದಿನಾಂಕಗಳನ್ನು ಪ್ರಕಟಿಸಿ, ಶುಲ್ಕ, ಡೊನೇಷನ್ ಗಳನ್ನು ಆನ್ ಲೈನ್ ನಲ್ಲಿ ಪಾವತಿಸಲು ಪೋಷಕರಿಗೆ ಸೂಚನೆ ನೀಡಿದ್ದವು. ನಿರ್ದಿಷ್ಟ ಶಾಲಾ ಸಂಸ್ಥೆಯೊಂದು ಪ್ರಿಕೆಜಿ ದಾಖಲಾತಿಗೆ ಏಪ್ರಿಲ್ ೧೫ರವರೆಗೆ, ಎಲ್ ಕೆ ಜಿ, ಯುಕೆಜಿ ಹಾಗೂ ಒಂದನೇ ತರಗತಿಗೆ ಏಪ್ರಿಲ್ ೧೬ರವರೆಗೆ ಅವಕಾಶವಿದೆ ಎಂದು ಪ್ರಕಟಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ದಾಖಲಾತಿಗಳನ್ನು ಮುಂದೂಡುವಂತೆ ಹೊರಡಿಸಿರುವ ಸರ್ಕಾರದ ಆದೇಶ ಉಲ್ಲಂಘಿಸಿದರೆ, ಸರ್ಕಾರಿ, ಖಾಸಗಿ(ಅನುದಾನಿತ ಹಾಗೂ ಅನುದಾನರಹಿತ) ಶಾಲೆಗಳಿಗೆ ದಂಡ ವಿಧಿಸಲಾಗುವುದು. ಸರ್ಕಾರದ ಆದೇಶವನ್ನು ಯಾವುದೇ ಶಾಲಾ ಆಡಳಿತ ಮಂಡಳಿ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹವರ ವಿರುದ್ದ ೧೮೯೭ರ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ ೩ರಡಿ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಪರಿಸ್ಥಿತಿಯ ಮೇಲೆ ನಿಗಾವಹಿಸಿ ಸರ್ಕಾರ ಆದೇಶವನ್ನು ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರುಗಳಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com