ಭಿಕ್ಷುಕರಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚುವ ಭೀತಿ
ಕೊಪ್ಪಳ: ಕೊರೊನಾ ಸೋಂಕಿನ ವಿಚಾರದಲ್ಲಿ ಇದುವರೆಗೂ ಹಸಿರುವಲಯದಲ್ಲಿದ್ದ ಕೊಪ್ಪಳದಲ್ಲಿ ಸೋಮವಾರ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇದ್ದುದರಿಂದ ಸೋಂಕಿತರ ಟ್ರಾವೆಲ್ ಹಿಸ್ಟರಿ ಅಧಿಕೃತವಾಗಿ ಜಿಲ್ಲಾಡಳಿತದಿಂದ ಬಿಡುಗಡೆಯಾಗಲು ವಿಳಂಬವಾಗಿದೆ.
ಈಗ ಮೂವರು ಸೋಂಕಿತರ ಟ್ರಾವೆಲ್ ಹಿಸ್ಟರಿ ಬಿಡುಗಡೆಯಾಗಿದ್ದು, ನೂರಕ್ಕೂ ಅಧಿಕ ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದು, ಅದರಲ್ಲಿ 9 ಜನ ಭಿಕ್ಷುಕರು ಸೇರಿದ್ದಾರೆ ಎಂಬ ಅಂಶ ಜಿಲ್ಲೆಯಲ್ಲಿ ಭೀತಿ ಮೂಡುಸಿದೆ.
ಈ ಬೆಳವಣಿಗೆಯಿಂದ ಕೊಪ್ಪಳ ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಶುರುವಾಗಿದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ.
ಮುಂಬೈದಿಂದ ಬಂದಿರುವ ಕೊರೋನಾ ಪಾಸಿಟಿವ್ ವ್ಯಕ್ತಿ ಪ್ರಯಾಣಿಸಿದ ಬಸ್ಸಿನಲ್ಲಿಯೇ 9 ಜನ ಭಿಕ್ಷುಕರು ಕೊಪ್ಪಳದಿಂದ ಕುಷ್ಟಗಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ. ಅಷ್ಟೇ ಅಲ್ಲಾ, ಕುಷ್ಟಗಿಯಲ್ಲಿ ಮನೆ ಮನೆ ಸುತ್ತಿ , ಭೀಕ್ಷೆ ಬೇಡಿದ್ದಾರೆ. ಇವರ ಯರ್ಯಾರು ಮನೆಗೆ ಹೋಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ.
ಹಾಗೊಂದು ವೇಳೆ ಈ ಭಿಕ್ಷುಕರ ವರದಿ ಏನಾದರು ಪಾಸಿಟಿವ್ ಬಂದರೆ ಕೊರೊನಾ ಸೋಂಕು ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾಗುವ ಭೀತಿ ತಲೆದೋರಲಿದೆ.
P-1173 ಸೋಂಕಿತ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದವರು. ಮುಂಬೈನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸೋಂಕಿತ ಮೇ .12 ರಂದು ಮುಂಬೈಯಿಂದ ಹುಬ್ಬಳ್ಳಿಗೆ ಟ್ರಕ್ನಲ್ಲಿ ಬರುತ್ತಾನೆ. ಹುಬ್ಬಳ್ಳಿಯಿಂದ ಮೇ. 14 ರಂದು ಹುಬ್ಬಳ್ಳಿಯಿಂದ ಗದಗಕ್ಕೆ ಟಾಟಾ ಎಸಿಯಲ್ಲಿ ಮಧ್ಯಾಹ್ನ 2ಕ್ಕೆ ಬರುತ್ತಾನೆ. ಅಂದು ಮಧ್ಯಾಹ್ನವೇ ಅದೇ ಟಾಟಾ ಎಸಿಯಲ್ಲಿ ಮಧ್ಯಾಹ್ನ 3-30ಕ್ಕೆ ಕೊಪ್ಪಳಕ್ಕೆ ಆಗಮಿಸುತ್ತಾನೆ. ಅಂದು ಅದೇ ಸಮಯದಲ್ಲಿ ಕೊಪ್ಪಳದಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಕುಷ್ಟಗಿಗೆ ಪ್ರಯಾಣ ಬೆಳೆಸುತ್ತಾನೆ.
ಈ ಬಸ್ಸಿನಲ್ಲಿಯೇ 26 ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರು ಇರುತ್ತಾರೆ. 26 ಪ್ರಯಾಣಿಕರ ಪೈಕಿ 9 ಭಿಕ್ಷುಕರು ಸಹ ಕುಷ್ಟಗಿಗೆ ಪ್ರಯಾಣ ಬೆಳಸಿರುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿದೆ ಎಂದು ಕುಷ್ಟಗಿಯಲ್ಲಿ ಭಿಕ್ಷಾಟನೆ ಮಾಡೋಣ ಎಂದು ಕುಷ್ಟಗಿಗೆ ಪ್ರಯಾಣ ಬೆಳಸಿ, ಅಲ್ಲಿ ಭಿಕ್ಷಾಟನೆ ಮಾಡಿದ್ದಾರೆ. ಆದರೆ ಇವರ ಬಸ್ಸಿನಲ್ಲಿ ಮುಂಬೈದಿಂದ ಬಂದಿದ್ದ ವ್ಯಕ್ತಿಯನ್ನು ಸಾಗಿಸಿ, ಕ್ವಾರಂಟೈನ್ ಮಾಡಲಾಗಿತ್ತು. ಈಗ ಆತನ ವರದಿ ಪಾಸಿಟಿವ್ ಬಂದಿರುವುದರಿಂದ ಈ ಭಿಕ್ಷುಕರು ಪ್ರಾಥಮಿಕ ಸಂಪರ್ಕದವರಾಗಿದ್ದು, ಜಿಲ್ಲಾಡಳಿತ ಇವರೆಲ್ಲರನ್ನು ಕ್ವಾರಂಟೈನ್ ಮಾಡಿದ್ದಾರೆ.
P-1173 ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸಂಖ್ಯೆಯೇ ಬರೋಬ್ಬರಿ 90. ಹಾಗೂ ಸೆಕಂಡರಿ ಸಂಪರ್ಕಕ್ಕೆ ಬಂದವರ ಸಂಖ್ಯೆ 87. ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ ಭಿಕ್ಷುಕರು ಇದ್ದಾರೆ ಎನ್ನುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ.
ಪ್ರಾಥಮಿಕ ಸಂಪರ್ಕದವರ ಸ್ವಾಬ್ ಪ್ರಯೋಗಾಲಯಕ್ಕೆ ಕಳುಹಿಸಿ, ಅದರ ವರದಿ ಬಂದ ಮೇಲೆಯೇ ಇದರ ಪರಿಣಾಮ ಎಷ್ಟು ದೊಡ್ಡ ಪ್ರಮಾಣದಲ್ಲಿ ಆಗಿದೆ ಎನ್ನುವುದು ಗೊತ್ತಾಗಬೇಕು.
P-1173 ವ್ಯಕ್ತಿಯೂ ಪ್ರಯಾಣ ಮಾಡಿದ ಬಸ್ಸಿನಲ್ಲಿಯೇ 26 ಸಹ ಪ್ರಯಾಣಿಕರು ಇದ್ದಾರೆ. ಈ ಪೈಕಿ 9 ಜನ ಭಿಕ್ಷುಕರು ಕೊಪ್ಪಳದಿಂದ ಕುಷ್ಟಗಿಗೆ ಹೋಗಿ, ಅಲ್ಲಿ ಭಿಕ್ಷಾಟನೆ ಮಾಡಿದ್ದಾರೆ. ಹೀಗಾಗಿ, ಇವರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಬಂದವರೆಲ್ಲರ ಸ್ವಾಬ್ನ್ನು ಟೆಸ್ಟಿಗೆ ಕಳುಹಿಸಲಾಗುವುದು.
- ಪಿ. ಸುನೀಲ್ಕುಮಾರ, ಡಿಸಿ, ಕೊಪ್ಪಳ.
ವರದಿ: ಬಸವರಾಜ ಕರುಗಲ್
Advertisement