ಮೀನು ರಫ್ತಿಗೆ ವಿಮಾನಯಾನ ಸೇವೆ ನಿರಾಕರಣೆ: ದಕ್ಷಿಣ ಕನ್ನಡ ರಫ್ತುದಾರರಿಗೆ ಭಾರೀ ಹೊಡೆತ
ಗಲ್ಫ್ ರಾಷ್ಟ್ರಗಳಿಗೆ ಶೀತಲವಾಗಿರುವ ಮೀನುಗಳನ್ನು ರಫ್ತು ಮಾಡಲು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿರಾಕರಿಸಿರುವ ಕಾರಣ ಕರಾವಳಿ ಭಾಗದ ಮೀನುಗಾರಿಕಾ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.
Published: 02nd November 2020 01:52 PM | Last Updated: 02nd November 2020 01:52 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಗಲ್ಫ್ ರಾಷ್ಟ್ರಗಳಿಗೆ ಶೀತಲವಾಗಿರುವ ಮೀನುಗಳನ್ನು ರಫ್ತು ಮಾಡಲು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿರಾಕರಿಸಿರುವ ಕಾರಣ ಕರಾವಳಿ ಭಾಗದ ಮೀನುಗಾರಿಕಾ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.
ಇತರ ಸರಕು ಮತ್ತು ಪ್ರಯಾಣಿಕರ ಸಾಮಾನು ಸರಂಜಾಮುಗಳ ಮೇಲೆ ಪರಿಣಾಮ ಬೀರುವ ಕೆಲವು ತಪ್ಪಾದ ಘಟನೆಗಳ ನಂತರ ವಿಮಾನಯಾನವು ಕೆಲವು ವರ್ಷಗಳ ಹಿಂದೆ ಮೀನುಗಳ ರಫ್ತನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.
ರಫ್ತುದಾರರು ಈಗ ಮಂಗಳೂರಿನಿಂದ ಟ್ರಕ್ ಗಳಲ್ಲಿ ಮೀನುಗಳನ್ನು ಗೋವಾ, ಬೆಂಗಳೂರು ಮತ್ತು ಕೋಜಿಕೋಡ್ ವಿಮಾನ ನಿಲ್ದಾಣಗಳಿಗೆ ಸಾಗಿಸಬೇಕಾಗಿದೆ, ಅಲ್ಲಿ ಏರ್ ಇಂಡಿಯಾ ಮತ್ತು ಇತರ ಗಲ್ಫ್ ಮೂಲದ ವಿಮಾನಯಾನ ಸಂಸ್ಥೆಗಳು ಸರಕುಗಳನ್ನು ಸಾಗಿಸಲಿವೆ. ಇದರಿಂದ ಸಾಗಣೆ ವೆಚ್ಚ ಮತ್ತು ಮೀನುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.
ಹೊಸ ಮಂಗಳೂರು ಬಂದರಿನಿಂದ ಸರಕು ಹಡಗುಗಳ ಮೂಲಕ ರಫ್ತು ಮಾಡುವ ಹೆಪ್ಪುಗಟ್ಟಿದ ಮೀನುಗಳಿಗಿಂತ ಭಿನ್ನವಾಗಿ, ದೋಣಿಗಳು ತಂದಾಗ ಅದೇ ದಿನ ತಣ್ಣಗಾದ ಮೀನುಗಳನ್ನು ಪ್ಯಾಕ್ ಮಾಡಿ ರಫ್ತು ಮಾಡಲಾಗುತ್ತದೆ.
ಅನೇಕ ಸಂದರ್ಭಗಳಲ್ಲಿ, 8-10 ಗಂಟೆಗಳ ಪ್ರಯಾಣದ ನಂತರ ಅದು ಬೆಂಗಳೂರಿಗೆ ತಲುಪುವ ಹೊತ್ತಿಗೆ, ಐಸ್ ಕರಗುತ್ತದೆ ಮತ್ತೆ ಅದನ್ನು ಪ್ಯಾಕ್ ಮಾಡಿ ಕಳುಹಿಸಬೇಕಾಗುತ್ತದೆ.
ಮರು ಪ್ಯಾಕ್ ಮಾಡಲು ಬೆಂಗಳೂರಿನಲ್ಲಿ ಗೋದಾಮುಗಳ ಕೊರತೆಯಿದೆ ಎಂದು ಸೀ ಫುಡ್ ವರ್ತಕ ಇಸ್ಮಾಯಿಲ್ ಎಂಬುವರು ಕಳವಳ ವ್ಯಕ್ತ ಪಡಿಸಿದ್ದಾರೆ.
ಕಡಿಮೆ ಅಂತರ ಮತ್ತು ವೆಚ್ಚ ತಗ್ಗುವ ಕಾರಣ ಅನೇಕ ರಫ್ತುದಾರರು ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆದ್ಯತೆ ನೀಡುತ್ತಾರೆ.
ಏರ್ ಲೈನ್ ಸಂಸ್ಥೆ ರಫ್ತು ನಿರಾಕರಿಸಿರುವುದಕ್ಕೆ ಯಾವುದೇ ಸೂಕ್ತ ಕಾರಣ ಇಲ್ಲ, ಇದು ತಿರುವನಂತಪುರಂ ವಿಮಾನ ನಿಲ್ದಾಣದಿಂದ ಶೀತಲವಾಗಿರುವ ಮೀನುಗಳನ್ನು ಒಯ್ಯುತ್ತದೆ. ನಿರ್ಧಿಷ್ಟ ಪ್ರಕಾರದಲ್ಲಿ ಪ್ಯಾಕಿಂಗ್ ಮಾಡದ ಸರಕುಗಳನ್ನು ಮಾತ್ರ ಅವರು ನಿರಾಕರಿಸಬೇಕು ಎಂದು ಹೇಳಿದ್ದಾರೆ.
ಶೀತಲವಾಗಿರುವ ಮೀನುಗಳನ್ನು ಎಂಐಎಯಲ್ಲಿ ಸ್ವೀಕರಿಸುವುದರಿಂದ ವಿಮಾನಯಾನ ಮತ್ತು ರಫ್ತುದಾರರಿಗೆ ಅನುಕೂಲವಾಗುತ್ತದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಇಒಗೆ ಇತ್ತೀಚೆಗೆ ಬರೆದ ಪತ್ರದಲ್ಲಿ, ಕೆನಾರ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಐಸಾಕ್ ವಾಸ್ ತಿಳಿಸಿದ್ದಾರೆ.