ಹಾಸನ: ಇಂದಿನಿಂದ ಈ ತಿಂಗಳ 16 ರ ವರಗೆ ಹಾಸನಾಂಬೆ ಹಾಗೂ ಸುದ್ದೇಶ್ವರ ಜಾತ್ರಾ ಮಹೋತ್ಸ ನಡೆಯಲಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಪ್ರವೇಶ ನಿರ್ಬಂಧಿಸಿದ್ದು, ಯೂ ಟ್ಯೂಬ್ ನಲ್ಲಿ ನೇರ ಪ್ರಸಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ವರ್ಷಕ್ಕೆ ಒಮ್ಮೆ ದೀಪಾವಳಿ ಸಂದರ್ಭದಲ್ಲಿ ತೆರೆಯುವ ಹಾಸನಾಂಬೆ ದರ್ಶನ ನಿಷೇಧಿಸಲಾಗಿದೆ. ಆದರೆ ಜನ ಸಾಮಾನ್ಯರಿಗೆ ತೊಂದರೆಯಾಗದಿರಲೆಂದು ಆನ್ ಲೈನ್ ಮೂಲಕ ವೀಕ್ಷಣೆಗೆ ಕ್ರಮ ತೆಗೆದುಕೊಂಡಿದೆ. ಅಲ್ಲದೆ ಹಾಸನ ನಗರದ 10 ಕಡೆ ಎಲ್ಇಡಿ ಪರದೆ ಅಳವಡಿಕೆ ಮಾಡಿದ್ದು, ಅಲ್ಲಿ ಭಕ್ತರು ದೇವಿಯ ದರ್ಶನ ಪಡೆಯಬಹುದು.
ಗುರುವಾರ 1.30ರ ಸುಮಾರಿಗೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ನವೆಂಬರ್ 5ರಿಂದ 17ರ ತನಕ ಈ ಬಾರಿ ದೇವಾಲಯ ಬಾಗಿಲು ತೆರೆದಿರುತ್ತದೆ. ಈಗಾಗಲೇ ಜಿಲ್ಲಾಡಳಿತ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ದೇವಾಲಯಕ್ಕೆ ಕಳುಹಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ದೇವಿಯ ಭಕ್ತರು http://hasanambalive2020.com/Home.aspx ಲಿಂಕ್ ಮೂಲಕ ದೇವಾಲಯದ ಪೂಜೆ, ದರ್ಶನವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಹಾಸನಾಂಬೆ ಜಾತ್ರೆಯ ಅಂಗವಾಗಿ ನಗರದಲ್ಲಿ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಆದರೆ, ಕೋವಿಡ್ ಪರಿಸ್ಥಿತಿ ಕಾರಣ ಭಕ್ತರಿಗೆ ಈ ಬಾರಿ ದರ್ಶನ ಇಲ್ಲವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು, 'ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮೊದಲ ದಿನ ಮತ್ತು ಕೊನೆಯ ದಿನ ಜನಪ್ರತಿನಿಧಿಗಳು, ವಿಶೇಷ ಗಣ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ" ಎಂದು ಹೇಳಿದ್ದಾರೆ.
Advertisement