ಚಿಕ್ಕಮಗಳೂರು: ಇದೇ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕ್ಕಮಗಳೂರಿನ ವೈದ್ಯರು ಹೃದಯನಾಳ ಸ್ಟೆಂಟ್ ಕಸಿಯನ್ನು ಯಶಸ್ವಿಯಾಗಿ ನೆಡಸಿದ್ದಾರೆ.
ಚಿಕ್ಕಮಗಳೂರಿನ ಆಶ್ರಯ ಹೃದಯ ಸಂಸ್ಥೆಯ ವೈದ್ಯರು ಸೋಂಕಿತ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಹೃದಯ ಸ್ಟೆಂಟ್ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
58 ವರ್ಷದ ವ್ಯಕ್ತಿ ಎದೆನೋವಿನಿಂದ ಬಳಲುತ್ತಿದ್ದರು. ಕೂಡಲೇ ಪರೀಕ್ಷೆ ನಡೆಸಿದಾಗ ಅಪಧಮನಿಗಳು ಮುಚ್ಚಿಹೋಗಿದ್ದವು. ಪರಿಣಾಮ ಹೃದಯ ಸ್ತಂಭನವಾಗಿತ್ತು. ಜೀವ ಉಳಿಸಲು ಶೀಘ್ರಗತಿಯಲ್ಲಿ ಸ್ಟೆಂಟ್ ಅಳವಡಿಸಲೇಬೇಕಿತ್ತು. ನಿಯಮಗಳ ಪ್ರಕಾರ ರೋಗಿಗೆ ಸಾಕಷ್ಟು ಪರೀಕ್ಷೆಗಳನ್ನು ನಡೆಸಬೇಕಿತ್ತು. ಪರೀಕ್ಷೆ ವೇಳೆ ವ್ಯಕ್ತಿಯಲ್ಲಿ ಕೊರೋನಾ ಇರುವುದು ದೃಢಪಟ್ಟಿತ್ತು. ಆದರೂ, ತಡಮಾಡದೆಯೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿತ್ತು. ಸ್ಥಗಿತಗೊಂಡಿದ್ದ ನರಗಳ ಪುನರ್ ಶ್ಚೇತನಕ್ಕೆ ಸ್ಟೆಂಟ್ ಅಳವಡಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ರೋಗಿಯನ್ನು ಐಸಿಯುವಿಗೆ ರವಾನಿಸಿ, ಕೆಲ ದಿನಗಳ ಕಾಲ ಅವಲೋಕನದಲ್ಲಿ ಇರಿಸಲಾಯಿತು. ಇದೀಗ ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದು, ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಪ್ರಕ್ರಿಯೆ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಡೆದಿದೆ ಎಂದು ವೈದ್ಯ ವಿಜಯ್ ಎಂಬುವವರು ಹೇಳಿದ್ದಾರೆ.
ಈ ನಡುವೆ ಪ್ರಕರಣ ಕುರಿತು ಮಾಹಿತಿ ತಿಳಿಸಿ ಚಿಕ್ಕಮಗಳೂರು ಜಿಲ್ಲಾ ಉಸ್ತವಾರಿ ಸಚಿವ ಸಿಟಿ ರವಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದು, ರೋಗಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
Advertisement