ಬೆಂಗಳೂರು: ಬಾರ್ ನಲ್ಲಿ ಜಗಳ ಮಾಡಿ ರಸ್ತೆಯಲ್ಲಿ ತಲವಾರು ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಆರೋಪಿಯೊಬ್ಬನ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ದೇವರಜೀವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೀಣ್ಯದ ಚಿಕ್ಕ ಬಿದರುಕಲ್ಲು ನಿವಾಸಿ ಪ್ರೇಮ್ ಕುಮಾರ್(30) ಬಂಧಿತ ಆರೋಪಿ. ಪೊಲೀಸರ ಗುಂಡೇಟು ತಗುಲಿ ಆತನ ಎಡಗಾಲಿಗೆ ಗಾಯವಾಗಿದ್ದು, ಆತನನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯ ವಿವರ
ಕಳೆದ ಸೆ.8ರಂದು ರಾತ್ರಿ ಡಿ.ಜೆ.ಹಳ್ಳಿಯ ಕೆಎಚ್ ಬಿ ಮುಖ್ಯ ರಸ್ತೆಯಲ್ಲಿರುವ ವಿನುತ ಬಾರ್ ನಲ್ಲಿ ದೀಪಕ್, ಕಪಿಲ್ ಹಾಗೂ ಶಿವ ಮತ್ತು ಪ್ರೇಮ್ ಕುಮಾರ್ ಅವರ ನಡುವೆ ಕುಡಿದ ಮತ್ತಿನಲ್ಲಿ ಜಗಳವಾಗಿತ್ತು. ಬಾರಿನಿಂದ ಹೊರ ಬಂದಾಗಲೂ ಪರಸ್ಪರ ಮಾತಿಗೆ ಮಾತು ಬೆಳೆದು ಪ್ರೇಮ್ ಕುಮಾರ್ ಮತ್ತು ಶಿವ ಸ್ನೇಹಿತರಾದ ದೀಪಕ್ ಮತ್ತು ಕಪಿಲ್ ಅವರ ಮೇಲೆ ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ನಂತರ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡುತ್ತಾ ಸಾರ್ವಜನಿಕ ರಲ್ಲಿ ಭೀತಿ ಹುಟ್ಟಿಸಿದ್ದರು. ಸ್ಥಳೀಯರು ಗಾಯಗೊಂಡಿದ್ದ ದೀಪಕ್ ಮತ್ತು ಕಪಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೇವರಜೀವನಹಳ್ಳಿ ಪೊಲೀಸರು, ತಲವಾರು ಝಳಪಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಪ್ರೇಮ್ ಕುಮಾರ್ ನನ್ನು ಬಂಧಿಸಿದ್ದಾರೆ.
Advertisement