ರೂ.400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ

ಬರುವ ಮೇ.1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ರೂ.400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಬರುವ ಮೇ.1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ರೂ.400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. 

ರಾಜ್ಯ ಸರ್ಕಾರಗಳಿಗೆ ರೂ.400 ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೂ.600 ದರದಲ್ಲಿ ಆಸ್ಟ್ರಾಝೆನಿಕಾ-ಆಕ್ಸ್‌ಫರ್ಡ್‌ ವಿವಿ ತಯಾರಿಸಿದ ಕೋವಿಶೀಲ್ಟ್‌ ಲಸಿಕೆಯನ್ನು ಮಾರಾಟ ಮಾಡಲಾಗುವುದು ಎಂದು ನಿನ್ನೆಯಷ್ಟೇ ಸೀರಂ ಇನ್ಸ್‌ಟ್ಯೂಟ್‌ ಆಫ್‌ ಇಂಡಿಯಾ ಹೇಳಿತ್ತು.

ಮೊದಲ ಹಂತದಲ್ಲಿ ರಾಜ್ಯದ ಜನತೆಗೆ ಒಂದು ಕೋಟಿ ಲಸಿಕೆ ನೀಡಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ರೂ.400 ಕೋಟಿ ವೆಚ್ಚದಲ್ಲಿ ಒಂದು ಕೋಟಿ ಕೋವಿಶೀಲ್ಡ್ ಲಸಿಕೆ ಖರೀಸಿ ಮಾಡಲು ಅನುಮತಿ ನೀಡಿದೆ. 

ಈ ಲಸಿಕೆಯನ್ನು 18 ವರ್ಷದಿಂದ 44 ವರ್ಷದವರೆಗಿನವರಿಗೆ ನೀಡಲಾಗುತ್ತದೆ. ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಹೀಗಾಗಿ ಕೇಂದ್ರ ಸರ್ಕಾರವು ಲಸಿಕೆ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿ ಮೇ.1ರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅನುಮತಿ ನೀಡಿದೆ. 

ಜನವರಿಯಲ್ಲಿ ಮೊದಲ ಹಂತದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ನಡೆಸಲಾಗಿತ್ತು. ಇದಾದ ಬಳಿಕ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು 45 ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಲಸಿಕೆ ವಿತರಣೆ ನಡೆಸಿತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ನೀಡಲಾಗಿತ್ತು. ಇದೀಗ ದೇಶದ ಎಲ್ಲಾ ವಯಸ್ಕ ನಾಗರಿಕರು ಈ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ದೇಶದಲ್ಲಿ ಸೋಂಕು ಹೆಚ್ಚಳದಿಂದ ಸರ್ಕಾರ ದೇಶದಲ್ಲಿ ದೊಡ್ಡ ಮಟ್ಟದ ಲಸಿಕೆ ವಿತರಣೆಗೆ ಚಾಲನೆ ನೀಡಿದೆ,

ಈ ನಡುವೆ ಕರ್ನಾಟಕದಲ್ಲಿ ಆಮ್ಲಜನಕದ ಸರಬರಾಜನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದ್ದು, ಕೈಗಾರಿಕಾ ಅನಿಲಗಳನ್ನು ಹೊತ್ತ 94 ಟ್ಯಾಂಕರ್‌ಗಳನ್ನು ತುರ್ತು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 94 ಟ್ಯಾಂಕರ್‌ಗಳಿದ್ದು, ಅದರಲ್ಲಿ 45 ದ್ರವ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ಉಳಿದವು ಸಾರಜನಕ ಮತ್ತು ಆರ್ಗಾನ್‌ನಂತಹ ಇತರ ಕೈಗಾರಿಕಾ ಅನಿಲಗಳನ್ನು ಸಾಗಿಸುತ್ತವೆ. ಕೆಲವು ವಿನಾಯಿತಿಗಳೊಂದಿಗೆ ವೈದ್ಯಕೀಯ ಆಮ್ಲಜನಕವನ್ನು ಬಳಸಲಾಗುತ್ತಿದೆ ”ಎಂದು ಮೂಲಗಳು ತಿಳಿಸಿವೆ. 

ರಾಜ್ಯದಲ್ಲಿ ಆಮ್ಲಜನಕದ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಇತರ ಸಂಪನ್ಮೂಲಗಳು ಮತ್ತು ಪೂರೈಕೆದಾರರಿದೆ ಎದುರು ನೋಡುತ್ತಿದೆ. ಆಮ್ಲಜನಕ ಘಟಕಗಳು ಉತ್ಪಾದನಾ ವೇಗವನ್ನು ಹೆಚ್ಚಿದರೂ ಕೂಡ ಅದನ್ನು ಸಾಗಿಸಲು ಪೂರಕವಾದ ಟ್ಯಾಂಕರ್ ವ್ಯವಸ್ಥೆ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 

ಆಸ್ಪತ್ರೆಗಳಿಗೆ ಹೆಚ್ಚೆಚ್ಚು ಸೋಂಕಿತರು ದಾಖಲಾಗುತ್ತಿರುವುದರಿಂದ ರಾಜ್ಯದಲ್ಲಿ ಆಮ್ಲಜನಕ ಸಮಸ್ಯೆ ಎದುರಾಗುತ್ತಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ ಉತ್ತಮವಾಗಿದ್ದು, ಸಣ್ಣಪುಟ್ಟ ಆಸ್ಪತ್ರೆಗಳಿಂದಲೇ ಸಮಸ್ಯೆ ಎದುರಾಗುತ್ತಿವೆ ಎಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಒಟ್ಟು 7 ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಗಳಿದ್ದು, ಬಳ್ಳಾರಿ ಒಂದರಲ್ಲಿಯೇ ನಾಲ್ಕು ಘಟಕಗಳಿವೆ. ಬೆಂಗಳೂರಿನಲ್ಲಿ ಒಂದು ಹಾಗೂ ಕೊಪ್ಪಳದಲ್ಲಿ ಒಂದು ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com