ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋನಾ 3ನೇ ಅಲೆ; ಹಾಲಿ ರೂಪಾಂತರಿ ವೈರಸ್ ಆದರೆ ಸೋಂಕು ಗಂಭೀರತೆ ಕಡಿಮೆ: ವೈದ್ಯರು

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭಿಕ ದಿನಗಳಲ್ಲಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಈ ವೇಳೆ ಹಾಲಿ ರೂಪಾಂತರಿ ವೈರಸ್ ಮುಂದುವರೆದಿದ್ದೇ ಆದರೆ, ಪರಿಸ್ಥಿತಿ ಅಷ್ಟಾಗಿ ಗಂಭೀರವಾಗಿರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭಿಕ ದಿನಗಳಲ್ಲಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಈ ವೇಳೆ ಹಾಲಿ ರೂಪಾಂತರಿ ವೈರಸ್ ಮುಂದುವರೆದಿದ್ದೇ ಆದರೆ, ಪರಿಸ್ಥಿತಿ ಅಷ್ಟಾಗಿ ಗಂಭೀರವಾಗಿರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಕೇರಳ ರಾಜ್ಯದಲ್ಲಿ ಸೋಂಕು ಏರಿಕೆಯಾದ 4-6 ವಾರಗಳ ಬಳಿಕ ರಾಜ್ಯದಲ್ಲೂ ಸೋಂಕು ಏರಿಕೆಯಾಗುವ ಬೆಳವಣಿಗೆಗಳು ಕಂಡು ಬರುತ್ತವೆ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್ ಮಂಜುನಾಥ್ ಅವರು ಹೇಳಿದ್ದಾರೆ. 

ಹಾಲಿ ರೂಪಾಂತರಿ ವೈರಸ್ ಮುಂದುವರೆದಿದ್ದೇ ಆದರೆ, ಕೋವಿಡ್ 3ನೇ ಅಲೆ 2ನೇ ಅಲೆಯಷ್ಟು ಗಂಭೀರವಾಗಿರುವುದಿಲ್ಲ. ಆದರೆ, ಹೊಸ ರೂಪಾಂತರಿ ವೈರಸ್ ಗಳು ಕಂಡುಬಂದರೆ, ಪರಿಸ್ಥಿತಿ ಗಂಭೀರವಾಗಿರಲಿದೆ ಎಂದು ತಿಳಿಸಿದ್ದಾರೆ. 

ಎರಡು ಡೋಸ್ ಲಸಿಕೆ ಪಡೆದು ಬೇರೆ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಮಾಡುವ ಅಗತ್ಯವಿಲ್ಲ ೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಆ ನಿಯಮವು ಕೇರಳ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಏಕೆಂದರೆ, ದೇಶದಲ್ಲಿ ಪ್ರಸ್ತುತ ಪತ್ತೆಯಾಗುತ್ತಿರುವ ಶೇ.65ರಷ್ಟು ಸೋಂಕು ಪ್ರಕರಣ ಕೇರಳ ರಾಜ್ಯದಿಂದಲೇ ಬರುತ್ತಿದೆ. ಹೀಗಾಗಿ ಆ ರಾಜ್ಯದಿಂದ ಬರುವವರು ರಾಜ್ಯ ಪ್ರವೇಶಿಸುವ ಸಂದರ್ಭದಲ್ಲಿ ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ತೋರಿಸಲೇಬೇಕಿದೆ ಹಾಗೂ ವಾರಗಳ ವರೆಗೂ ಕ್ವಾರಂಟೈನ್ ಗೊಳಗಾಗಿ, ಮರು ಪರೀಕ್ಷೆಗೊಳಪಡಿಸಬೇಕು ಎಂದಿದ್ದಾರೆ. 

ಕೊರೋನಾ 3ನೇ ಅಲೆ ಆತಂಕ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ಕುರಿತ ನಿಯಮವನ್ನು ಡಿಸೆಂಬರ್ ವರೆಗೂ ಮುಂದುವರೆಸಬೇಕು. ಕೇರಳದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. 5 ಮಂದಿ ಪೈಕಿ ಒಬ್ಬರಲ್ಲಿ ಕೋವಿಡ್ ಪಾಸಿಟಿವ್ ಬರುತ್ತಿದೆ. ಗಡೀ ಪ್ರದೇಶಗಳಲ್ಲಿ ವಾಣಿಜ್ಯ ಕೆಲಸ, ಶೈಕ್ಷಣಿಕ ಉಧ್ದೇಶಗಳಿಂದ ರಾಜ್ಯಕ್ಕೆ ಬರುವವರಿಗೆ ಪರೀಕ್ಷೆಗಳನ್ನು ನಡೆಸಬೇಕು. ಕಳೆದ ಬಾರಿ ಮಂಗಳೂರು ನರ್ಸಿಂಗ್ ಕಾಲೇಜಿನಿಂದಾಗಿ ಕ್ಲಸ್ಟರ್ ಪ್ರಕರಣಗಳು ಆರಂಭವಾಗಿತ್ತು. ಈ ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಹೆಚ್ಚು ವ್ಯಾಸಾಂಗ ಮಾಡುತ್ತಿದ್ದರು. ಉಡುಪಿಯಲ್ಲಿ 25-30 ನರ್ಸಿಂಗ್ ಕಾಲೇಜುಗಳಿವೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ. 

ಮುಂದಿನ ಅಲೆಯನ್ನು ಎದುರಿಸಲು ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಬೇಕಿದೆ. ರೂಪಾಂತರಿ ವೈರಸ್ ಎದುರಿಸುವುದು ಹಾಗೂ ಈ ವೈರಸ್'ಗಳ ವಿರುದ್ಧ ಹೋರಾಡಲು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇಧಕ್ಕಾಗಿ 264 ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳನ್ನು ಸಂಯೋಜಿಸಲಾಗಿದೆ. ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಆಮ್ಲಜನಕ ಸಾಮರ್ಥ್ಯ ಉತ್ತಮವಾಗಿದೆ. ಸರ್ಕಾರ ಔಷಧಿಗಳ ದಾಸ್ತಾನು ಮಾಡಿಕೊಂಡಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com