ಕೋವಿಡ್ ತಪಾಸಣೆಯಿಲ್ಲದೆ ಕೇರಳ, ಮಹಾರಾಷ್ಟ್ರಗಳಿಂದ ಮಂಗಳೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ!
ಮಂಗಳೂರು: ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕಂಡುಬಂದ ನಂತರ ಸರ್ಕಾರ ಗಡಿ ಜಿಲ್ಲೆಗಳಿಗೆ ಪ್ರವೇಶಿಸುವವರಿಗೆ ತೀವ್ರ ಎಚ್ಚರಿಕೆ ನೀಡಿದೆ. ಆದರೆ ಮಂಗಳೂರು ರೈಲು ನಿಲ್ದಾಣದಲ್ಲಿ ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡುವ ಕಾರ್ಯ ನಡೆಯುತ್ತಿಲ್ಲ.
ಕಳೆದ ಜುಲೈ 1ರಂದು ಸರ್ಕಾರ ಮಾರ್ಗಸೂಚಿ ಹೊರಡಿಸಿ ಕರ್ನಾಟಕ್ಕೆ ವಿಮಾನ, ಬಸ್ಸು, ರೈಲು, ಟ್ಯಾಕ್ಸಿ ಅಥವಾ ಖಾಸಗಿ ವಾಹನಗಳಲ್ಲಿ ಬರುವ ಪ್ರಯಾಣಿಕರು 72 ಗಂಟೆಗಳೊಳಗೆ ಮಾಡಿಸಿರುವ ನೆಗೆಟಿವ್ ಆರ್ ಟಿ-ಪಿಸಿಆರ್ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ತೋರಿಸಬೇಕೆಂದು ಹೇಳಿತ್ತು. ಆದರೆ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ.
ಗಡಿಭಾಗಗಳಲ್ಲಿ ಪೊಲೀಸರು, ಕಂದಾಯ ಇಲಾಖೆ ಮತ್ತು ಆರೋಗ್ಯಾಧಿಕಾರಿಗಳು ಹಗಲು-ರಾತ್ರಿ ತಪಾಸಣೆ ಮಾಡುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಈ ಹಿಂದೆ ಹೇಳಿದ್ದರು. ಕೇರಳ-ಕರ್ನಾಟಕದ ಗಡಿಭಾಗ ತಲಪಾಡಿಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ತೋರಿಸಬೇಕೆಂದು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದ್ದರು. ಮಹಾರಾಷ್ಟ್ರದಿಂದ ಬರುವವರಿಗೆ ಈ ನಿಯಮ ಕಡ್ಡಾಯವಾಗುತ್ತದೆ ಎಂದು ಎಲ್ಲಾ ಪ್ರಯಾಣಿಕರಿಗೆ ಸೂಚಿಸಲಾಗಿತ್ತು.
ರಸ್ತೆಯಲ್ಲಿ ಬರುವ ಪ್ರಯಾಣಿಕರು ಸರ್ಕಾರದ ಕೋವಿಡ್ ನಿಯಮ ಪಾಲಿಸುತ್ತಿದ್ದರೂ ರೈಲುಗಳಲ್ಲಿ ನೆರೆಯ ರಾಜ್ಯಗಳಿಂದ ಬರುವ ಪ್ರಯಾಣಿಕರ ಪರೀಕ್ಷೆ ಕಡ್ಡಾಯವಾಗಿ ಆಗುತ್ತಿಲ್ಲ, ಪ್ರಯಾಣಿಕರು ನೆಗೆಟಿವ್ ಆರ್ ಟಿ-ಪಿಸಿಆರ್ ಪ್ರಮಾಣಪತ್ರ ತರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.