ವೆಂಟಿಲೇಟರ್ ಬೆಂಬಲದಲ್ಲಿದ್ದರೂ ಸೋಂಕಿತ ವ್ಯಕ್ತಿ ಸಾವು: ಕುಟುಂಬಸ್ಥರಿಂದ ವೈದ್ಯನ ಮೇಲೆ ಹಲ್ಲೆ
ಬೆಂಗಳೂರು: ವೆಂಟಿಲೇಟರ್ ಬೆಂಬಲದಲ್ಲಿದ್ದರೂ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತೀವ್ರ ನಿಗಾ ಘಟಕ (ಐಸಿಯು) ಮುಖ್ಯ ಸಲಹೆಗಾರರೊಬ್ಬರ ಮೇಲೆ ಮೃತ ಸೋಂಕಿತರ ವ್ಯಕ್ತಿಯ ಕುಟುಂಬಸ್ಥರು ಶನಿವಾರ ಮಧ್ಯಾಹ್ನ ಹಲ್ಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಸೋಂಕಿತ ವ್ಯಕ್ತಿ ಕಳೆದ 35 ದಿನಗಳಿಂದಲೂ ವೆಂಟಿಲೇಟರ್ ಬೆಂಬಲದಲ್ಲಿಯೇ ಇದ್ದರು. ಸರ್ಕಾರದ ಮೀಸಲಾತಿ ಪಡೆದುಕೊಂಡು ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವೈದ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದ್ದು, ಮುಖದ ಮೇಲೆ ಮೊಬೈಲ್ ಫೋನ್ ಎಸೆಯಲಾಗಿದೆ. ಫೇಸ್ ಶೀಲ್ಡ್ ಧರಿಸಿದ್ದರಿಂದ ಯಾವುದೇ ಹಾನಿಗಳಾಗಲಿಲ್ಲ ಎಂದು ಹಲ್ಲೆಗೊಳಗಾದ ವೈದ್ಯರು ಹೇಳಿದ್ದಾರೆ.
ವೈದ್ಯನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ ಸಿಬ್ಬಂದಿಗಳು ನಂತರ ಪುಟ್ಟೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ, ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಕುರಿತು ಆಸ್ಟರ್-ಆರ್'ವಿ ಆಸ್ಪತ್ರೆಯ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ.ಸೋಮಲರಾಮ್ ವೆಂಕಟೇಶ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಅಸಮಾಧಾನ ಹೊರಹಾಕಿದ್ದಾರೆ.
ನಗರದ ಗೌರವಾನ್ವಿತ ಆಸ್ಪತ್ರೆಯೊಂದರ ತೀರ್ವ ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರ ಮೇಲೆ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಈ ವೈದ್ಯರು ಕೊರೋನಾ ಮೊದಲ ಹಾಗೂ 2ನೇ ಅಲೆಯಲ್ಲಿ ಸುದೀರ್ಘವಾಗಿ ನಿರಾಯಾಸದಿಂದ ಕೆಲಸ ಮಾಡಿ. ನೂರಾರು ಜೀವಗಳನ್ನು ರಕ್ಷಣೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ