ಹೈಕೋರ್ಟ್
ಹೈಕೋರ್ಟ್

ಪರಿಹಾರದ ಅರ್ಜಿ ಅಪ್'ಲೋಡ್'ಗೆ ಸೇವಾಸಿಂಧುನಲ್ಲಿ ಕಮಿಷನ್ ವಸೂಲಿ: ಹೈಕೋರ್ಟ್​​​ ಮುಂದೆ ಸತ್ಯ ಬಿಚ್ಚಿಟ್ಟ ಕೆಎಸ್ಎಲ್ಎಸ್ಎ

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳನ್ನು ಅಪ್'ಲೋಡ್ ಮಾಡಲು ಮತ್ತು ದೃಢೀಕರಿಸಲು ಕಾರ್ಮಿಕರಿಂದ ಸೇವಾ ಸಿಂಧು ಕೇಂದ್ರಗಳಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರವು ಮಂಗಳವಾರ ಹೈಕೋರ್ಟ್'ಗೆ ವರದಿ ಸಲ್ಲಿಸಿದೆ.

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ರೂ.2 ಸಾವಿರ ಪರಿಹಾರ ಕೋರಿ ಅಸಂಘಟಿತ ವಲಯದ ಕಾರ್ಮಿಕರು ಸಲ್ಲಿಸುವ ಅರ್ಜಿಗಳನ್ನು ಅಪ್'ಲೋಡ್ ಮಾಡಲು ಮತ್ತು ದೃಢೀಕರಿಸಲು ಕಾರ್ಮಿಕರಿಂದ ಸೇವಾ ಸಿಂಧು ಕೇಂದ್ರಗಳಲ್ಲಿ ರೂ.150-250ರವರೆಗೂ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರವು ಮಂಗಳವಾರ ಹೈಕೋರ್ಟ್'ಗೆ ವರದಿ ಸಲ್ಲಿಸಿದೆ. 

ಗೃಹ ಕಾರ್ಮಿಕರಿಗೂ ಕೋವಿಡ್ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಕೆಎಸ್ಎಲ್ಎಸ್ಎ ಈ ಲಿಖಿತ ಮಾಹಿತಿ ಸಲ್ಲಿಸಿದೆ.

ಕಾರ್ಮಿಕರಿಗೆ ನೆರವು ನೀಡಲು ಸರ್ಕಾರ ಘೋಷಿಸಿರುವ ಪ್ಯಾಕೇಜ್ ಪರಿಹಾರ ಹಣ ಪಡೆದುಕೊಳ್ಳಲು ಸಮಸ್ಯೆಯಾಗುತ್ತಿರುವ ಕುರಿತು ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕಮಿಷನ್ ಹಣಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಕೆಎಸ್ಎಲ್ಎಸ್ಎ ಗೆ ಹಲವು ದೂರು ಬಂದಿದ್ದವು.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಹಾಸನ, ರಾಮನಗರ, ಮೈಸೂರು, ಬೆಳಗಾವಿ, ಶಿವಮೊಗ್ಗ ಮತ್ತು ಬೀದರ್‌ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ವಿಚಾರಣೆ ನಡೆಸುವಂತೆ ಸೂಚಿಸಿದ್ದೆವು. ಆ ಪ್ರಕಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಪರಿಶೀಲಿಸಿ ವರದಿ ಸಲ್ಲಿಸಿವೆ.

ಈ ವೇಳೆ ಕಾರ್ಮಿಕರಿಂದ ಕಮಿಷನ್​ಗೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದೆ. ಹೀಗಾಗಿ ಅಸಂಘಟಿತ ವಲಯದ ಕಾರ್ಮಿಕರು ಸರ್ಕಾರದ ನೆರವು ಪಡೆದುಕೊಳ್ಳಲು ಕಾರ್ಮಿಕ ಇಲಾಖೆ ಅರ್ಜಿ ಸಲ್ಲಿಸುವುದಕ್ಕೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರದಿ ಪರಿಶೀಲಿಸಿದ ಪೀಠ, 2 ಸಾವಿರದಂತಹ ಸಣ್ಣ ಮೊತ್ತದ ಪರಿಹಾರ ಪಡೆಯಲು ಕಾರ್ಮಿಕರು ಈ ಪರಿ ಕಷ್ಟಪಡಬೇಕೇ? ನೋಂದಣಿ ಪ್ರಕ್ರಿಯೆಯೂ ಕ್ಲಿಷ್ಟವಾಗಿದ್ದು, ಅರ್ಹ ಫಲಾನುಭವಿ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುವ ಅಪಾಯವಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಕಾರ್ಮಿಕ ಇಲಾಖೆಯು ಈ ಸಂಬಂಧ ಕೂಡಲೇ ಗಮನಹರಿಸಬೇಕು. ಮುಂದಿನ ವಿಚಾರಣೆ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದು ವಿವರಣೆ ನೀಡಬೇಕು ಎಂದು ನಿರ್ದೇಶಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com