ಚಿತ್ರದುರ್ಗ: ಆ್ಯಂಬುಲೆನ್ಸ್, ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶುಚಿಗೊಳಿಸುತ್ತಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಆಯಿತೋಳ್ ಗ್ರಾಮದ 37 ವರ್ಷದ ಕರಿಯಪ್ಪ, 38 ಎಂ, ಕರಿಯಪ್ಪ ಹಾಗೂ ಚಿತ್ರದುರ್ಗ ತಾಲೂಕಿನ ಸೀಬಾರ ಗ್ರಾಮದ 36 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತಿರುವ ಪಿಎನ್ ಸಿ ಕಂಪನಿ ಹೆದ್ದಾರಿ ಶುಚಿಗೊಳಿಸಲು ಕಾರ್ಮಿಕರನ್ನು ನಿಯೋಜಿಸಿತ್ತು. ಕಾರ್ಮಿಕರು ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ರಸ್ತೆ ಬದಿಯ ಮಣ್ಣು ತೆಗೆದು ತುಂಬುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಮತ್ತೊಂದು ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ರ್ಯಾಕ್ಟರ್ ಅಪ್ಪಳಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಇನ್ನು ರೋಗಿಯನ್ನು ಕರೆತರುತ್ತಿದ್ದ ಆ್ಯಂಬುಲೆನ್ಸ್ ಸಹ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ್ದು ಆ್ಯಂಬುಲೆನ್ಸ್ ನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement