ಹಾನಿಗೊಳಗಾದ ಪ್ರದೇಶದಲ್ಲಿ ಸಚಿವ ಆರ್.ಅಶೋಕ್
ಹಾನಿಗೊಳಗಾದ ಪ್ರದೇಶದಲ್ಲಿ ಸಚಿವ ಆರ್.ಅಶೋಕ್

ಟೌಕ್ಟೇ ಚಂಡಮಾರುತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ

ರಾಜ್ಯದ ಕರಾವಳಿ ಪ್ರದೇಶ ಹಾಗೂ ಇತರೆ ಪ್ರದೇಶಗಳ ಮೇಲೆ ಟೌಕ್ಟೇ ಚಂಡಮಾರುತ ಗಂಭೀರ ಪರಿಣಾಮ ಬೀರಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 
Published on

ಮಂಗಳೂರು: ರಾಜ್ಯದ ಕರಾವಳಿ ಪ್ರದೇಶ ಹಾಗೂ ಇತರೆ ಪ್ರದೇಶಗಳ ಮೇಲೆ ಟೌಕ್ಟೇ ಚಂಡಮಾರುತ ಗಂಭೀರ ಪರಿಣಾಮ ಬೀರಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 

ಟೌಕ್ಟೇ ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್ಎಂಪಿಟಿಯಲ್ಲಿ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಟೌಕ್ಟೇ ಚಂಡಮಾರುತ ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ಕೂಡಲೇ ತಲಾ ರೂ.10 ಸಾವಿರ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ರೂ.1 ಲಕ್ಷ ಪೂರ್ತಿ ಹಾನಿಯಾದ ಮನೆಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. 

ಚಂಡಮಾರುತ ಸಂತ್ರಸ್ತರಿಗೆ 6 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಮಂಗಳೂರಿನಲ್ಲಿ 168 ಮಂದಿ ಆಶ್ರಯ ಪಡೆದಿದ್ದಾರೆ. ಈ ಪೈಕಿ 63 ಮನೆಗಳು ಭಾಗಶಃ, 24 ಮನೆಗಳು ಪೂರ್ತಿ ಹಾನಿಯಾಗಿವೆ. ಈ ಎಲ್ಲಾ ಮನೆಗಳಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ರಸ್ತೆ, ಬೆಳೆಹಾನಿ,ಮೆಸ್ಕಾಂ'ಗೆ ಉಂಟಾದ ನಷ್ಟದ ಬಗ್ಗೆ ಆಯಾ ಇಲಾಖೆ ಮೂಲಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಚಂಡಮಾರುತದಿಂದ ರಾಜ್ಯದಲ್ಲಿ 22 ತಾಲೂಕಿನ 121 ಗ್ರಾಮಗಳು ತೊಂದರೆಗೆ ಒಳಗಾಗಿವೆ. ಒಟ್ಟು 6 ಜೀವನ ಹಾನಿಯಾಗಿದೆ. 333 ಮನೆಗಳಿಗೆ ಹಾನಿಯಾಗಿದೆ. ತೋಟಗಾರಿಕೆಗೆ ಸಂಬಂಧಿಸಿದ 2.87 ಹೆಕ್ಟೇರ್ ಹಾನಿ ಸಂಭವಿಸಿದೆ. 644 ವಿದ್ಯುತ್ ಕಂಬ ಹಾನಿಯಾಗಿದೆ. 104 ಬೋಟ್ ಗಳು ಹಾನಿಗೀಡಾಗಿವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಾಳ ಖಾತೆಯಲ್ಲಿ ಒಟ್ಟು ರೂ.106 ಕೋಟಿ ಹಣವಿದ್ದು, ಪರಿಹಾರ ಕಾರ್ಯಗಳಿಗೆ ಬಳಸಲು ಅನುಮತಿಸಿ ಆದೇಶ ನೀಡಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com