ಬೆಂಗಳೂರು: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಕುಡಿದು 6 ಮಂದಿ ಸಾವನ್ನಪ್ಪಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಐಎಎಸ್ ಅಧಿಕಾರಿ ಮೋನಿಶ್ ಮದ್ಗಲ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೃತರ ಕುಟುಂಬಕ್ಕೆ ರೂ.3 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದರು.
ಬಳಿಕ ಪ್ರಕರಣದ ಕುರಿತು ಮಾತನಾಡಿ, ಐಎಎಸ್ ಅಧಿಕಾರಿ ಮೌನಿಷ್ ಮದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಸೂಕ್ತ ತನಿಖೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರು.
ಹೂವಿನ ಹಡಗಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿದ ಪ್ರಕರಣ ಬಹಳ ಗಂಭೀರವಾದ ವಿಚಾರವಾಗಿದೆ. ಈ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಸಿವೇಜ್ ವಾಟರ್ ಡ್ರಿಂಕಿಂಗ್ ವಾಟರ್ ಹೇಗೆ ಮಿಕ್ಸ್ ಆಯ್ತು ಎಂದು ತನಿಖೆ ನಡೆಸಿ, ಈ ಬಗ್ಗೆ ವರದಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇನೆ, ವರದಿ ಕೊಟ್ಟ ನಂತರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಫಜಲ ಪುರದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ, ಅಲ್ಲೂ ಕೂಡ ಕಲುಷಿತ ನೀರು ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತವ ವರದಿ ನೀಡುವಂತೆ ಸೂಚಿಸಿದ್ದೇನೆ. ಅಲ್ಲಿಯೂ ಕೂಡ ಹೂವಿನ ಹಡಗಲಿ ರೀತಿಯಲ್ಲಿ ಪರಿಹಾರ ನೀಡುವ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದ ಕಲುಷಿತ ನೀರು ಸೇವನೆಯಿಂದ ಒಟ್ಟು ಆರು ಜನರು ಮೃತಪಟ್ಟಿದ್ದಾರೆ.
ಬೋರ್ ವೆಲ್ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಈ ವೇಳೆ, ಹಳೆ ಪೈಪ್ ಗಳಿಗೆ ಹಾನಿ ಉಂಟಾಗಿದೆ. ಇದರಿಂದ ಡ್ಯಾಮೇಜ್ ಆದ ಪೈಪ್ ನೊಳಗೆ ಚರಂಡಿ ನೀರು ಸೇರಿಕೊಂಡು ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದಾರೆ. ಪರಿಣಾಮ ಸುಮಾರು 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು.
Advertisement