ಬೆಂಗಳೂರು: ಅತೀವೇಗವಾಗಿ ಬರುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸಿಗೆ ಗುದ್ದಿರುವ ದುರ್ಘಟನೆ ನಗರದಲ್ಲಿ ನಡೆದಿದೆ.
ಮುಂಜಾನೆ ಯಮಲೂರು ಬಳಿ ದುರ್ಘಟನೆ ನಡೆದಿದೆ. ಹಳೇ ವಿಮಾನ ನಿಲ್ದಾಣ ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದರು. ಮುಖ್ಯಪೇದೆ ಮುಬಾರಕ್ ಆಲಿ ಅವರು ಕಾರೊಂದು ಅತೀವೇಗವಾಗಿ ಬರುತ್ತಿದ್ದನ್ನು ಗಮನಿಸಿದ್ದಾರೆ.
ವಾಹನ ನಿಲ್ಲಿಸುವಂತೆ ಕೈ ಅಡ್ಡ ಹಾಕಿದ್ದಾರೆ. ಆಗ ಚಾಲಕ ವಾಹನ ನಿಧಾನ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮುಬಾರಕ್ ಆಲಿ ಅವರು ಕಾರು ಮುಂಭಾಗ ನಿಂತು ಇಳಿಯಲು ಸೂಚಿಸಿದ್ದಾರೆ. ಸೂಚನೆ ಪಾಲಿಸದ ಚಾಲಕ ಆಲಿ ಅವರಿಗೆ ಕಾರು ಗುದ್ದಿಸಿದ್ದಾನೆ. ಪರಾರಿಯಾಗಲು ಯತ್ನಿಸಿಸುವಾಗ ರಸ್ತೆಬದಿ ಗೋಡೆಗೆ ಗುದ್ದಿಸಿದ್ದಾನೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪರೀಕ್ಷಿಸಿದಾಗ ಮದ್ಯಪಾನ ಮಾಡಿರುವುದು ತಿಳಿದಿದೆ.
ಚಾಲಕ ರಾಮಾಂಜಲು ಮತ್ತು ಆತ ಚಲಾಯಿಸುತ್ತಿದ್ದ ಕ್ರೇಟಾ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆಲಿ ಅವರ ಎಡಗಾಲು ಮಂಡಿ, ಮೊಣಕಾಲಿಗೆ ಗಾಯವಾಗಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೊಲೆಯತ್ನ ಮೊಕದ್ದಮೆಗಳನ್ನು ಹೂಡಲಾಗಿದೆ.
Advertisement