ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಲ್ಡರ್ ಗಳಿಂದ ಗೃಹ ಖರೀದಿ ಮಾಡಿರುವವರು, ಹಲವಾರು ಕಾರಣಗಳಿಂದ ತಮಗೆ ಬರಬೇಕಿದ್ದ ಪರಿಹಾರ ಮೊತ್ತವನ್ನು ಪಡೆಯುವುದಕ್ಕೆ ಅಲೆಯುತ್ತಿದ್ದಾರೆ.
ರೇರಾ-ಕೆ ಕೋರ್ಟ್ ಗೃಹ ಖರೀದಿದಾರರಿಗೆ ಬಿಲ್ಡರ್ ಗಳು ಪರಿಹಾರ ಹಣವನ್ನು ನೀಡುವುದಕ್ಕೆ ಆದೇಶಿಸಿತ್ತು. ಆದರೆ ಪರಿಹಾರ ಹಣವನ್ನು ಪಡೆದುಕೊಳ್ಳುವುದಕ್ಕೆ ಗೃಹ ಖರೀದಿದಾರರಿಗೆ ಈ ವರೆಗೂ ಸಾಧ್ಯವಾಗಿಲ್ಲ.
ರೇರಾ-ಕೆ ವೆಬ್ ಸೈಟ್ ನ ಅಂಕಿ-ಅಂಶಗಳ ಪ್ರಕಾರ 448 ರೆವಿನ್ಯೂ ರಿಕವರಿ ಸರ್ಟಿಫಿಕೇಟ್ಸ್ (ಪರಿಹಾರ ಆದೇಶವನ್ನು) ನ್ನು ಬಿಲ್ಡರ್ ಗಳಿಗೆ ಕಳಿಸಲಾಗಿದ್ದು, ಗೃಹ ಖರೀದಿದಾರರಿಗೆ ಒಟ್ಟಾರೆ 183 ಕೋಟಿ ರೂಪಾಯಿ ಮೊತ್ತದ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಆದರೆ ಈ ವರೆಗೂ ಕೇವಲ 5 ಆರ್ ಆರ್ ಸಿಯನ್ನಷ್ಟೇ ನೀಡಲಾಗಿದ್ದು, 1.66 ಕೋಟಿ ರೂಪಾಯಿ ಮೊತ್ತದ ಪರಿಹಾರ ನೀಡಲಾಗಿದೆ. ಅದೂ 2020 ರ ಸೆಪ್ಟೆಂಬರ್ 15 ವರೆಗಿನ ದಾಖಲೆಗಳ ಪ್ರಕಾರ!
ಪೀಪಲ್ಸ್ ಕಲೆಕ್ಟೀವ್ ಎಫರ್ಟ್ಸ್ ನ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂಎಸ್ ಶಂಕರ್ ಈ ಬಗ್ಗೆ ಮಾತನಾಡಿದ್ದು, ಸರ್ಕಾರ ಅಥವಾ ರೇರಾ ಅಧಿಕಾರಿಗಳು ಯಾರೂ ಸಹ ಈ ಬಗ್ಗೆ ಗಂಭೀರವಾಗಿಲ್ಲ. ಬಿಲ್ಡರ್ ಗಳು ಆದೇಶ ಪಾಲನೆ ಮಾಡುವಂತೆ ನೋಡಿಕೊಳ್ಳುತ್ತಿಲ್ಲ. ಹಲವು ಬಾರಿ ಭೇಟಿ ಮಾಡಿ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ವರೆಗೂ 5 ವಾರೆಂಟ್ ಗಳಷ್ಟೇ ಸ್ವಾಧೀನಪಡಿಸಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಈ ಪೈಕಿ ಬೆಳಗಾವಿಯ ಗೋಡ್ಸೆವಾಡಿಯಲ್ಲಿನ ಲೋಟಸ್ ಕೌಂಟಿ ಅಪಾರ್ಟ್ಮೆಂಟ್ ನಲ್ಲಿ ಗೃಹ ಖರೀದಿಸಿದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. 84 ಯುನಿಟ್ ಗಳ ಖರೀದಿದಾದರು ತಲಾ 50 ಲಕ್ಷ ರೂಪಾಯಿಗಳನ್ನು 2013 ರಲ್ಲೇ ಬಿಲ್ಡರ್ ಗೆ ನೀಡಿದ್ದರು. ಕ್ಲಬ್ ಹೌಸ್, ವಾಕಿಂಗ್ ಟ್ರ್ಯಾಕ್, ಬೃಹತ್ ಉದ್ಯಾನ, ಜಿಮ್, ಮಕ್ಕಳ ಆಟದ ಪ್ರದೇಶ, ಹವಾನಿಯಂತ್ರಿತ ಹಾಲ್ ಗಳ ಸೌಲಭ್ಯಗಳನ್ನು ನೀಡುವುದಾಗಿ ಬಿಲ್ಡರ್ ಭರವಸೆ ನೀಡಿದ್ದ. ಆದರೆ 2017-18 ರಲ್ಲಿ ಮನೆಗಳನ್ನು ಹಸ್ತಾಂತರಿಸುವ ವೇಳೆ ಇದ್ಯಾವುದೂ ಲಭ್ಯವಿಲ್ಲದ ಕಾರಣ ಸತೀಶ್ ವಾಮನ್ ಗಿರಿ ಎಂಬ ಬಿಲ್ಡರ್ ನ್ನು ಪದೇ ಪದೇ ಪ್ರಶ್ನಿಸಲಾಗಿತ್ತು. ಪ್ರಯೋಜನವಾಗದ ಕಾರಣ 7 ಮಂದಿ ಗೃಹ ಖರೀದಿದಾರರು ರೇರಾ ಕೋರ್ಟ್ ಮೆಟ್ಟಿಲೇರಿದ್ದರು.
ಗೃಹ ಖರೀದಿದಾರರಿಗೆ ನೀಡಲಾಗಿದ್ದ ಭರವಸೆಯನ್ನು ಈಡೇರಿಸುವುದಕ್ಕೆ 2019 ರಲ್ಲಿ ಆದೇಶಿಸಿದ್ದ ಕೋರ್ಟ್ ಸೌಲಭ್ಯಗಳು ಲಭ್ಯವಾಗುವವರೆಗೂ ಪ್ರತಿ ತಿಂಗಳು ಗೃಹ ಖರೀದಿದಾರರಿಗೆ 10,000 ರೂಪಾಯಿ ಪರಿಹಾರ ನೀಡುವಂತೆ ಬಿಲ್ಡರ್ ಗೆ ಆದೇಶಿಸಿತ್ತು. ಆದರೆ ಬಿಲ್ಡರ್ ತಮ್ಮ ಅನುಮತಿ ಇಲ್ಲದೇ ಆಸ್ತಿಯನ್ನು 3ನೇ ವ್ಯಕ್ತಿಗೆ ಹಸ್ತಾಂತರಿಸಿ ನಾಪತ್ತೆಯಾಗಿದ್ದಾನೆ ಎಂದು ಗೃಹ ಖರೀದಿಸಿರುವವರು ಆರೋಪಿಸಿದ್ದಾರೆ.
Advertisement