ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡ್ ಮುಗಳಿ ಗ್ರಾಮದ ಬ್ರೈನ್ ಡೆಡ್ ಆದ ಯುವಕನ ಕುಟುಂಬ ಸದಸ್ಯರು ಆತನ ಅಂಗಾಂಗಳನ್ನು ತುರ್ತು ಅಗತ್ಯವಿದ್ದ ನಾಲ್ವರು ರೋಗಿಗಳಿಗೆ ದಾನ ಮಾಡಿದ್ದಾರೆ.
ಲಾಡ್ ಮುಗಳಿ ಗ್ರಾಮದ ಮಹೇಶ್ ರೇವಣ ಸಿದ್ದಪ್ಪ ಎಂಬ 19 ವರ್ಷದ ಯುವಕ ಆಗಸ್ಟ್ 20 ಮೇಲಿನ ಅಂತಸ್ತಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ನಂತರ ಯುನೈಟೆಡ್ ಆಸ್ಪತ್ರೆಗೆ ಆತನನನ್ನು ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ಕಲಬುರಗಿಯ ಚಿರಾಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ವೈದ್ಯರು ವಿವಿಧ ಪ್ರಕಾರದ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆತನ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಕಂಡುಬಂದಿತ್ತು. ಈ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿ, ಅಂಗಾಂಗ ದಾನ ಮಾಡಲು ಇಷ್ಟವಿದೆಯೇ ಎಂದು ಕೇಳಲಾಗಿತ್ತು. ಅದಕ್ಕೆ ಅವರು ಸಮ್ಮತಿಸಿದ್ದರು. ಕುಟುಂಬದ ಸದಸ್ಯರ ಒಪ್ಪಿಗೆ ಪಡೆದ ನಂತರ ಮೃತದೇಹವನ್ನು ಪರೀಕ್ಷಿಸಿ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಲಾಯಿತು. ಇಂದು ಬೆಳಗ್ಗೆ ಅಂಗಾಂಗಳನ್ನು ತೆಗೆಯಲಾಯಿತು ಎಂದು ಚಿರಾಯು ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್ ದೊಶೆಟ್ಟಿ ಹೇಳಿದರು.
ಮಹೇಶ್ ಕಿಡ್ನಿಯನ್ನು ಚಿರಾಯು ಆಸ್ಪತ್ರೆಯಲ್ಲಿನ ರೋಗಿಯೊಬ್ಬರಿಗೆ ಅಳವಡಿಸಲಾಯಿತು.ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಲಿವರ್ ಗೆ ಮನವಿ ಮಾಡಿ ವೈದ್ಯರ ತಂಡವೊಂದನ್ನು ಆಸ್ಪತ್ರೆಗೆ ಕಳುಹಿಸಿತ್ತು. ನಂತರ ಅದನ್ನು ಕಲಬುರಗಿ ಮತ್ತು ತೆಲಂಗಾಣದ ಪೊಲೀಸರ ನೆರವಿನಿಂದ ಜಿರೋ ಟ್ರಾಫಿಕ್ ನಲ್ಲಿ ಹೈದ್ರಾಬಾದ್ ಗೆ ಕಳುಹಿಸಲಾಯಿತು. ತದನಂತರ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಯಿತು. ಕಣ್ಣುಗಳನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ನೀಡಲಾಯಿತು. ಮೃತನ ಅಂಗಾಂಗಗಳನ್ನು ಕೆಲ ಜನರ ಜೀವ ರಕ್ಷಣೆಗೆ ನೀಡುವ ಮೃತ ಮಹೇಶ್ ಕುಟುಂಬ ಸದಸ್ಯರು ಸ್ವಲ್ಪ ನೆಮ್ಮದಿಯಲ್ಲಿದ್ದಾರೆ.
Advertisement