ಬೆಂಗಳೂರು: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ, ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ, ಅಲ್ಲಿಂದ ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದರು, ಮಾದಕ ವಸ್ತುವನ್ನು ಬಳಸುತ್ತಿದ್ದರು ಎಂಬ ಮಾಹಿತಿ ಬಂದಿತ್ತು.
ನಿಖರ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ವಿಶೇಷ ತಂಡ ಜೈಲಿಗೆ ಇಂದು ದಾಳಿ ನಡೆಸಿ ಎಲ್ಲ ಕಡೆ ತಪಾಸಣೆ ನಡೆಸಿತು. ಮೊಬೈಲ್, ಸಿಮ್ ಕಾರ್ಡುಗಳು, ಗಾಂಜಾ, ಚಾಕು ಸೇರಿದಂತೆ ಹಲವು ವಸ್ತುಗಳನ್ನು ಕೈದಿಗಳ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ,ಇಂದು ನಸುಕಿನ ಜಾವ 5 ಗಂಟೆಗೆ ಶ್ವಾನ ದಳದ ಮೂಲಕ ಸಿಸಿಬಿ ತಂಡ ದಾಳಿ ನಡೆಸಿತು ಎಂದು ಸಿಸಿಬಿ ವಿಶೇಷ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದರ ಜೊತೆಗೆ ಬೆಂಗಳೂರಿನ ಪಶ್ಚಿಮ ಭಾಗದ ಹಲವು ರೌಡಿಗಳ ನಿವಾಸದ ಮೇಲೆ ಕೂಡ ಪೊಲೀಸರು ದಾಳಿ ಮಾಡಿ ಮಾರಕಾಸ್ತ್ರ ಹಾಗೂ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಮತ್ತು ಬ್ಯಾಡರಹಳ್ಳಿ ಪ್ರದೇಶಗಳಲ್ಲಿ ನಸುಕಿವ ಜಾವದಿಂದಲೇ ದಾಳಿ ಆರಂಭವಾಗಿದೆ. 105 ಮನೆಗಳ ಮೇಲೆ ದಾಳಿ ಮಾಡಲಾಗಿದ್ದು 76 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ತಿಳಿಸಿದ್ದಾರೆ.
Advertisement