ಬೆಂಗಳೂರು: ಮದುವೆಗೆ ಹಣ ಹೊಂದಿಸಲು 10 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಭಯಾನಕ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸರು ಕೇಸ್ ಗ ಕಿಂಗ್ ಪಿನ್ ನ ಇಬ್ಬರು ಸಹಚರನನ್ನು ಬಂಧಿಸಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಮೊಹಮ್ಮದ್ ಜಾವೇದ್ ಶೇಖ್ ಅದೇ ದಿನ ಇನ್ನೊಬ್ಬ ಹುಡುಗನನ್ನು ಅಪಹರಿಸಿದ್ದಾನೆ ಆದರೆ ಅವನು ಪ್ರತಿರೋಧಿಸಿದ ನಂತರ ಅವನನ್ನು ಮುಕ್ತಗೊಳಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಜಿಗಣಿಯ ಶಿಕಾರಿ ಪಾಳ್ಯದ ಗೊಲ್ಲರಹರಳ್ಳಿ ರಸ್ತೆಯಲ್ಲಿರುವ ಎಂಡಿ ಅಬ್ಬಾಸ್ ಎಂಬುವರ ಮಗ ಮೊಹಮದ್ ಆಸೀಫ್ ಅಲಿ ಎಂಬ ಬಾಲಕನನ್ನು ಜೂನ್ 4 ರಂದು ಸಂಜೆ ಅಪಹರಿಸಲಾಗಿತ್ತು. ರಾತ್ರಿ 10 ಗಂಟೆಗೆ ಕರೆ ಮಾಡಿ 25 ಲಕ್ಷ ರು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ, ಜೊತೆಗೆ ಪೊಲೀಸರಿಗೆ ವಿಷಯ ತಿಳಿಸಿದಂತೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಕೂಡಲೇ ಹೆಬ್ಬಗೋಡಿ ಪೊಲೀಸ್ ಠಾಣೆಗೆ ತೆರಳಿದ ಅಬ್ಬಾಸ್ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಹಣಕ್ಕಾಗಿ ಬೇಡಿಕೆ ಬಂದಿದ್ದು ಛತ್ತೀಸ್ ಗಡದ ರಾಯಪುರದಿಂದ ಕರೆ ಬಂದಿತ್ತು. ಪೊಲೀಸರ ಒಂದು ತಂಡ ರಾಯಪುರಕ್ಕೆ ತೆರಳಿತು. ಕೂಡಲೇ ಮೊಹಮದ್ ನೌಶಾದ್ ಮತ್ತು ಸಿರಾಜ್ ನನ್ನು ಪೊಲೀಸರು ಬಂಧಿಸಿದರು. ಅವರು ಕಿಂಗ್ಪಿನ್ ಮೊಹಮ್ಮದ್ ಜಾವೇದ್ ಶೇಖ್ ನ ದೂರದ ಸಂಬಂಧಿಗಳಾಗಿದ್ದರು.
ಬಿಹಾರ ಮೂಲದ ಶೇಕ್ ಸುಮಾರು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಸಿಸಿಟಿವಿ ಅಂಗಡಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಸಂತ್ರಸ್ತ ಬಾಲಕ ಇದ್ದ ಕಟ್ಟಡದಲ್ಲೇ ಆರೋಪಿ ಕೂಡ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಘಟನೆ ನಡೆದ ದಿನ ಬಾಲಕನ ತಂದೆಗೆ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಹುಡುಕಾಟದಲ್ಲಿ ಸೇರಿದ್ದನು, ಆದರೆ ಅಬ್ಬಾಸ್ ಪೊಲೀಸರಿಗೆ ದೂರು ನೀಡಿದ ಮೇಲೆ ಭಯಗೊಂಡ ಆತ ಬಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ದಿನ ಕಿಡ್ನಾಪ್ ಆಗಿದ್ದ ಬಾಲಕ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ತನ್ನನ್ನು ಕಿಡ್ನಾಪ್ ಮಾಡಿದ್ದು, ನಂತರ ನಾನು ವಿರೋಧಿಸಿದ್ದಕ್ಕೆ, ಯಾರಿಗೂ ಹೇಳದಂತೆ ಬೆದರಿಸಿ ನನ್ನನ್ನು ಬಿಡುಗಡೆ ಮಾಡಿದ್ದರು ಎಂದು ತಿಳಿಸಿದ್ದಾನೆ.
ಬಾಲಕನ ಸಹಾಯದಿಂದ ಪೊಲೀಸರು ಆರೋಪಿಯಿದ್ದ ಜಾಗಕ್ಕೆ ತೆರಳಿದ್ದಾರೆ, ಸಂತ್ರಸ್ತ ಬಾಲಕನ ಮನೆಯಿಂದ ಆರೋಪಿ 5 ಕಿಮೀ ದೂರದಲ್ಲಿದ್ದ. ನಾವು ಆಲ್ಲಿಗೆ ತಲುಪುವಷ್ಟರಲ್ಲಿ ಬಾಲಕನ ಕೊಲೆಯಾಗಿ ಆರೋಪಿ ಪರಾರಿಯಾಗಿದ್ದ. ಕಲ್ಲಿನಿಂದ ಬಾಲಕನ ತಲೆ ಜಜ್ಜಿ ಕೊಲೆ ಮಾಡಿದ್ದ, ಅವರು ಇರುವ ಸ್ಥಳದ ಬಗ್ಗೆ ನಮಗೆ ಖಚಿತವಾದ ಸುಳಿವುಗಳಿವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್ ಕೆ ಹೇಳಿದ್ದಾರೆ.
ತನ್ನ ಗೆಳತಿಯೊಂದಿಗೆ ಶೇಖ್ ವಿವಾಹ ಶೀಘ್ರದಲ್ಲೇ ನಡೆಯಲಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ವಿವಾಹದ ನಂತರ ಗೆಳತಿಯೊಂದಿಗೆ ಮುಂಬೈನಲ್ಲಿ ನೆಲೆಸಲು ಯೋಜಿಸಿದ್ದರಿಂದ ಶೇಖ್ಗೆ ಹಣದ ಅವಶ್ಯಕತೆಯಿತ್ತು. ಆದ್ದರಿಂದ, ಕಿಡ್ನಾಪ್ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement