ಬೆಂಗಳೂರು: ಮಹದೇವಪುರ ವಿಧಾನಸಭಾ ವ್ಯಾಪ್ತಿಯ ಕನ್ನಮಂಗಲದಲ್ಲಿ ನಿರ್ಮಾಣವಾಗುತ್ತಿರುವ ಪೂರ್ವ ಲಾಲ್ ಬಾಗ್, ಸಸ್ಯ ತೋಟವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೋಮವಾರ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅದಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, 70 ಎಕರೆ ವಿಸ್ತೀರ್ಣದಲ್ಲಿ ಲಾಲ್ ಬಾಗ್ ನಿರ್ಮಾಣವಾಗುತ್ತಿದ್ದು, ಜಾಗರ್ಸ್ ಪಾತ್, ಕಾಂಪೌಂಡ್ ಕಾಮಗಾರಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗಿಡಗಳಿಗೆ ನೀರಾವರಿ ವ್ಯವಸ್ಥೆ ಮುಂತಾದ ಕಾಮಗಾರಿಗಳು ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದಿಂದ 190 ಲಕ್ಷ ರೂಪಾಯಿ ಈ ಉದ್ದೇಶಕ್ಕಾಗಿ ನಿಗದಿಪಡಿಸಿ ಅನುಮೋದನೆ ನೀಡಲಾಗಿದೆ, ಲಾಲ್ ಬಾಗ್ ನಂತರ ನಿರ್ಮಾಣವಾಗುತ್ತಿರುವ ಎರಡನೆಯ ಸಸ್ಯ ಶಾಸ್ತ್ರೀಯ ಉದ್ಯಾನವನ ಇದಾಗಿದೆ, 2120 ಪ್ರಭೇದಗಳ ಸಸ್ಯ ಸಂಕುಲ ಇಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಈ ನಡುವೆ ದುಬಾರೆ ಶಿಬಿರದಿಂದ ಕುಶ ಎಂಬ ಆನೆಯನ್ನು ಕಾಡಿಗೆ ಬಿಡುಗಡೆ ಮಾಡಿರುವ ಸಚಿವ ಲಿಂಬಾವಳಿಯವರ ನಿಲುವನ್ನು ಬಿಜೆಪಿ ಸಚಿವ ಮನೇಕಾ ಗಾಂಧಿಯವರು ಶ್ಲಾಘಿಸಿದ್ದು, ಈ ಕುರಿತು ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ನಿರ್ಧಾರವು ವನ್ಯಜೀವಿ ಸಂರಕ್ಷಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ರಕ್ಷಣಾ ಪ್ರಯತ್ನಗಳಿಗೆ ಬೆಂಬಲ ನೀಡವುದಾಗಿ ಪತ್ರದಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
Advertisement