ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಕೇಂದ್ರ ಸರ್ಕಾರ 2ನೇ ಬಾರಿಗೆ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ರೈಲಿನ ಮೂಲಕ ಬೆಂಗಳೂರಿಗೆ ರವಾನಿಸಿದೆ.
ಇಂದು ಮುಂಜಾನೆ ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಕಳಿಂಗನಗರದಿಂದ ಬೆಂಗಳೂರಿಗೆ ತಲುಪಿದೆ. ಈ ಕುರಿತು ಸೌತ್ ವೆಸ್ಟರ್ನ್ ರೈಲ್ವೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಕರ್ನಾಟಕದ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಕಳಿಂಗನಗರದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಇಂದು ಬೆಳಗಿನ ಜಾವ 3.20 ಬೆಂಗಳೂರಿಗೆ ತಲುಪಿದೆ ಎಂದು ಹೇಳಿದೆ.
ತಲಾ 20 ಟನ್ ಆಕ್ಸಿಜನ್ ಸಾಮರ್ಥ್ಯದ ಒಟ್ಟು ಆರು ಕಂಟೇನರ್ ಗಳಲ್ಲಿ ಸುಮಾರು 120 ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಆಗಮಿಸಿದೆ. ಈ ಹಿಂದೆ ಅಂದರೆ ಮೇ 11ರಂದು ಇದೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಟಾಟಾನಗರದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಕರ್ನಾಟಕ ತಲುಪಿತ್ತು.
ಇಂದಿನ ರವಾನೆಯೂ ಸೇರಿದಂತೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಕರ್ನಾಟಕಕ್ಕೆ ಬಂದ ಆಕ್ಸಿಜನ್ ಪ್ರಮಾಣ 240 ಟನ್ ಗೆ ಏರಿಕೆಯಾಗಿದೆ.
ಇದೇ ಟಾಟಾನಗರದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಇಂದು ಸಾಯಂಕಾಲ ಬೆಂಗಳೂರು ತಲುಪಲಿದೆ ಎಂದು ತಿಳಿಸಿದೆ.
Advertisement