ಬೆಂಗಳೂರು: ಇತ್ತೀಚಿಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಂಠೀರವ ಸ್ಟುಡಿಯೋ ಹಾಗೂ ತಮ್ಮ ನಿವಾಸದಲ್ಲಿ ಮಾಡಬೇಕಾದ ಆಚರಣೆಗಾಗಿ ಕುಟುಂಬ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಮವಾರ ಪುಣ್ಯತಿಥಿಯೊಂದಿಗೆ ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ನಿರ್ಧರಿಸಿದೆ.
ಈ ಮಧ್ಯೆ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹರಿದುಬರುತ್ತಿದ್ದು, ಭಾನುವಾರ ಬಳ್ಳಾರಿಯಿಂದ ಬಂದಿದ್ದ ಜೋಡಿಯೊಂದು ಮದುವೆಯಾಗಿದೆ. ಗುರುಪ್ರಸಾದ್ ಮತ್ತು ಗಂಗಾ ಇಬ್ಬರೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು, ತಮ್ಮ ಪೋಷಕರ ಅನುಮತಿ ಪಡೆದು ಪುನೀತ್ ಸಮಾಧಿ ಬಳಿ ವಿವಾಹವಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಸಾಯುವ ಮುನ್ನ ಅವರ ಆರೋಗ್ಯ ಪರಿಸ್ಥಿತಿ ಅರಿಯುವಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಆಕ್ರೋಶ ಮಡುಗಟ್ಟಿದ ನಂತರ ಡಾ. ರಮಣ ರಾವ್ ಅವರ ಕ್ಲಿನಿಕ್ ಹಾಗೂ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಮಧ್ಯೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ (ಪನಾ) ಡಾ. ರಮಣರಾವ್ ಅವರ ಬೆಂಬಲಕ್ಕೆ ನಿಂತಿದೆ. ಮಾಧ್ಯಮಗಳಲ್ಲಿನ ಇಂತಹ ತೀರ್ಪು ಸಮಾಜದಲ್ಲಿ ಅಪ ನಂಬಿಕೆಯನ್ನು ಸೃಷ್ಟಿಸಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ ಪ್ರಸನ್ನ ಹೆಚ್ .ಎಂ ಮತ್ತು ಕಾರ್ಯದರ್ಶಿ ಡಾ. ರಾಜಶೇಖರ ವಿಎಲ್ ಹೇಳಿದ್ದಾರೆ. ಡಾ. ರಾವ್ ಅವರ ಕಡೆಗೆ ಬೆರಳು ಮಾಡಲು ಪ್ರಯತ್ನಿಸಿರುವ ಜನರ ವಿರುದ್ಧ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.
Advertisement