ಬೆಂಗಳೂರು: 2021ರ ಕರ್ನಾಟಕ ಯುವ ನೀತಿ ರೂಪಿಸಲು ರಚಿಸಿರುವ ನೂತನ ಸಮಿತಿಯ ಅಧ್ಯಕ್ಷರ ಜೊತೆಗೆ ರೇಷ್ಮೆ , ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ಭಾನುವಾರ ಅನೌಪಚಾರಿಕ ಚರ್ಚೆ ನಡೆಸಿದರು. ಯುವ ನೀತಿ 2021 ರೂಪಿಸಲು ರಚಿಸಲಾಗಿರುವ ನೂತನ ಸಮಿತಿ ನಾಳೆ ಸಭೆ ಸೇರಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಯುವನೀತಿ 2021 ಸಮಿತಿ ಅಧ್ಯಕ್ಷ ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ ಡಾ. ಬಾಲ ಸುಬ್ರಹ್ಮಣ್ಯಂ ಇಂದು ಸಚಿವ ಡಾ.ನಾರಾಯಣಗೌಡ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.
ಕೇಂದ್ರ ಸರ್ಕಾರ ಯುವಕರಿಗೆ ತಂದಿರುವ ಕಾರ್ಯಕ್ರಮಗಳು, ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳು ಸೇರಿದಂತೆ ಯುವ ನೀತಿ ರಚನೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸಚಿವರು ಮಾಹಿತಿ ವಿನಿಮಯ ಮಾಡಿಕೊಂಡರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಯುವನೀತಿ 2021 ರೂಪಿಸುವ ಸಂಬಂಧ ಸರ್ಕಾರ ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ ಡಾ. ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ 13 ಜನರ ಸಮಿತಿ ರಚಿಸಿದೆ.
Advertisement