ಬೆಂಗಳೂರು: ಬಿಡಿಎಯಿಂದ ನೀಡಲಾಗಿದ್ದ ನಾಗರಿಕ ಸೌಕರ್ಯ (ಸಿವಿಕ್ ಅಮಿನಿಟಿ-ಸಿ.ಎ) ನಿವೇಶನದ ಮಾಲಿಕತ್ವವನ್ನು ಪಡೆಯುವುದಕ್ಕೆ ಕಳೆದ 6 ತಿಂಗಳಿನಿಂದ ನಡೆಯುತ್ತಿದ್ದ ಪ್ರಹಸನದ ಪ್ರಕರಣವೊಂದು ನ.16 ರಂದು ಸುಖಾಂತ್ಯ ಕಂಡಿದೆ.
75 ಪೊಲೀಸ್ ಸಿಬ್ಬಂದಿ, ಬಿಡಿಎ ನ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮಾಲಿಕತ್ವವನ್ನು ಪಡೆಯುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ನಿವೇಶನದ ಮಾಲಿಕತ್ವ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಾಯಿತು.
ಬನಶಂಕರಿ 6 ನೇ ಹಂತದ ವ್ಯಾಪ್ತಿಗೆ ಬರುವ, ಸೋಮಪುರ ಗ್ರಾಮದಲ್ಲಿನ 22,000 ಚದರ ಅಡಿ ವಿಸ್ತೀರ್ಣ ಹೊಂದಿರುವ ನಿವೇಶನವನ್ನು ಸಾಮಾಜಿಕ ಉದ್ದೇಶಕ್ಕಾಗಿ ಬಿಡಿಎಯಿಂದ ಗೌಡ ಸಾರಸ್ವತ ಬ್ರಾಹ್ಮಣರ ಪರಿವಾರು ಪಡೆದಿತ್ತು. ಈ ಆಸ್ತಿ 18 ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಘಟನೆಗಳ ಬಗ್ಗೆ ಜಿಎಸ್ ಬಿಪಿ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಪ್ರಭು ಮಾತನಾಡಿದ್ದು, ಸಂಘಟನೆ, ಸಮುದಾಯದಿಂದ ಸದುದ್ದೇಶಕ್ಕಾಗಿ ಹಲವು ಯೋಜನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಮುದಾಯ ಭವನ, ದೇವಾಲಯ, ವೃದ್ಧಾಶ್ರಮ, ಅರ್ಥಿಕವಾಗಿ ದುರ್ಬಲರಾಗಿರುವ ವರ್ಗಕ್ಕೆ ಪಿ.ಜಿ ನಮ್ಮ ಯೋಜನೆಗಳ ಪೈಕಿ ಇವೆ. ಇವುಗಳ ನಿರ್ಮಾಣಕ್ಕಾಗಿ ಪಡೆಯಲಾಗಿದ್ದ ನಿವೇಶನದ ನೋಂದಣಿ ಪ್ರಕ್ರಿಯೆ ಮಾ.1 ರಂದೇ ಪೂರ್ಣಗೊಂಡಿತ್ತಾದರೂ ನಿವೇಶನವನ್ನು ಸುಪರ್ದಿಗೆ ಪಡೆಯಲು ಸ್ಥಳೀಯ ರೈತರು ಸ್ಥಳೀಯ ರಾಜಕಾರಣಿಗಳ ಆಣತಿಯ ಮೇರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ನಿವೇಶನವನ್ನು ಸಾಮಾಜಿಕ ಸದುದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿರುವುದರಿಂದ ಜಿಎಸ್ ಪಿಬಿ ನಿವೇಶನಕ್ಕಾಗಿ ಬಿಡಿಎ ಗೆ 18 ಲಕ್ಷ ರೂಪಾಯಿ ಪಾವತಿ ಮಾಡಿತ್ತು.
ನೋಂದಣಿಯಾದ 6 ತಿಂಗಳಲ್ಲಿ ನಿರ್ಮಾಣ ಪ್ರಾರಂಭಿಸಲು ಬಿಡಿಎ ಗಡುವು ವಿಧಿಸಿತ್ತು. ಇದರ ಭಾಗವಾಗಿ ಜಿಎಸ್ ಪಿಬಿ ನಿವೇಶನವನ್ನು ಸುಪರ್ದಿಗೆ ಪಡೆಯುವುದಕ್ಕೆ ಮೂರು ಬಾರಿ ಪ್ರಯತ್ನ ಮಾಡಿತ್ತು. ಆದರೆ ಸಾಧ್ಯವಾಗಲಿಲ್ಲ ಈಗ ಭದ್ರತೆಯೊಂದಿಗೆ ಮಾಲಿಕತ್ವವನ್ನು ಹಸ್ತಾಂತರಿಸಲಾಗಿದೆ ಎಂದು ಅಣ್ಣಪ್ಪ ಪ್ರಭು ಹೇಳಿದ್ದಾರೆ. ಬಿಡಿಎ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು ಬೇಲಿ ಹಾಕುವ ಕಾರ್ಯಾಚರಣೆ ಬೆಳಿಗ್ಗೆ 9 ಕ್ಕೆ ಪ್ರಾರಂಭವಾಗಿ ಸಂಜೆ 6:30 ಕ್ಕೆ ಅಂತ್ಯವಾಯಿತು ಎಂದು ತಿಳಿಸಿದ್ದಾರೆ.
Advertisement