41 ವರ್ಷದ ವ್ಯಕ್ತಿ ಅಪಹರಣ: ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಬಂಧನ

41 ವರ್ಷದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾ ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 41 ವರ್ಷದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾ ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಪೇಂದ್ರ ಕುಮಾರ್, ಕುಮಾರ್ ಅವರ ಪೋಷಕರಾದ ಚಂದ್ರರಾವ್ ಮತ್ತು ಲಕ್ಷ್ಮಿ ಬಾಯಿ, ಸಮೀರ್ ಖಾನ್, ಅವರ ಪತ್ನಿ ಸಾನಿಯಾ ಕೌಸರ್ ಮತ್ತು ನೀಲಂ.

ಅಪಹರಣಕ್ಕೊಳಗಾದ ನಾಗರಾಜ್‌ ಅವರು ಬಂಧಿತ ಆರೋಪಿ ಉಪೇಂದ್ರನಿಗೆ ಪರಿಚಯವಾಗಿದ್ದರು. ನಾಗರಾಜ್‌ ಲೋನ್‌ಗಾಗಿ ಪ್ರಯತ್ನಿಸುತ್ತಿದ್ದ ವಿಷಯ ಉಪೇಂದ್ರನಿಗೆ ತಿಳಿದಿತ್ತು. ಈ ವೇಳೆ ನಿಮಗೆ ಲೋನ್‌ ಕೊಡಿಸುವುದಾಗಿ ನಾಗರಾಜ್ ಬಳಿ ಡಾಕ್ಯುಮೆಂಟ್‌ ಪಡೆದ ಉಪೇಂದ್ರ, ಲೋನ್‌ಗೆ ಅಪ್ಲೈ ಮಾಡಿದ್ದ. ಇತ್ತ ಡಾಕ್ಯುಮೆಂಟ್ ನೀಡಿ ನಾಗರಾಜ್ ಕೆಲಸದ ನಿಮಿತ್ತ ಕಾಂಗೋಗೆ ತೆರಳಿದ್ದರು.

ನಾಗರಾಜ್‌ಗೆ ಸುಮಾರು ಒಂದು ಕೋಟಿಯವರೆಗೆ ಲೋನ್‌ ಸಿಗಲಿದೆ ಎಂದು ಬ್ಯಾಂಕ್‌ನವರು ಹೇಳಿದ್ದರು. ಅದಕ್ಕಾಗಿ ನಾಗರಾಜ್ ಈಗಾಗಲೇ ಹೊಂದಿರುವ ಐದು ಲಕ್ಷ ಲೋನ್‌ ಅನ್ನು ಕ್ಲಿಯರ್ ಮಾಡಬೇಕು ಎಂದಿದ್ದರು. ಹೀಗಾಗಿ ಒಂದು ಕೋಟಿಯ ಆಸೆಗೆ ಬಿದ್ದ ಆರೋಪಿ ಉಪೇಂದ್ರ ನಾಗರಾಜ್ ಹೊಂದಿದ್ದ ಐದು ಲಕ್ಷ ಲೋನ್ ಅನ್ನು ತಾನೇ ತೀರಿಸಿದ್ದ. ಈ ಮಧ್ಯೆ ಕೆಲವೇ ದಿನಗಳಲ್ಲಿ ನಾಗರಾಜ್ ಅವರು ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡು ಕಾಂಗೋದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಇತ್ತ ಲೋನ್ ಹಣ ಬಿಡುಗಡೆ ವಿಚಾರವಾಗಿ ಸಹಿ ಹಾಕಲು ನಾಗರಾಜ್‌ರನ್ನು ಬ್ಯಾಂಕ್‌ಗೆ ಬರಲು ಅಧಿಕಾರಿಗಳು ಹೇಳಿದ್ದರು. ಈ ವೇಳೆ ಕೆಲಸ ಇಲ್ಲದ ಕಾರಣ ಲೋನ್ ಪಡೆಯಲು ನಾಗರಾಜ್ ನಿರಾಕರಿಸಿದ್ದರು.

ನಾಗರಾಜ್ ನಿರ್ಧಾರದಿಂದ ಕಂಗಾಲಾದ ಉಪೇಂದ್ರ, ತಾನು ಖರ್ಚು ಮಾಡಿರುವ 5 ಲಕ್ಷಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡುವಂತೆ ಧಮ್ಕಿ ಹಾಕಲು ಶುರು ಮಾಡಿದ್ದ. ಹಣ ನೀಡಲು ನಾಗರಾಜ್ ನಿರಾಕರಿಸಿದಾಗ ಸಮೀರ್ ಎಂಬಾತನಿಗೆ ಉಪೇಂದ್ರ ಸುಪಾರಿ ನೀಡಿದ್ದಾನೆ. ಸಮೀರ್ ಮೂಲಕ ನಾಗರಾಜ್‌ನನ್ನು ಕಿಡ್ನಾಪ್ ಮಾಡಿಸಿದ್ದ ಉಪೇಂದ್ರ, ಮುದ್ದಿನಪಾಳ್ಯದ ನೀಲಮ್ಮ ಎಂಬಾಕೆಯ ಮನೆಯಲ್ಲಿರಿಸಿ ಹಲ್ಲೆ ನಡೆಸಿದ್ದ. ಅಲ್ಲದೇ, ನಾಗರಾಜ್‌ ಅಕೌಂಟ್‌ನಲ್ಲಿದ್ದ  ಹಣ ಕಿತ್ತುಕೊಂಡು ಬಿಟ್ಟು ಕಳಿಸಿದ್ದಾರೆ.

ತಾನು ಹಲ್ಲೆಗೊಳಗಾದ ಬಗ್ಗೆ ನಾಗರಾಜ್ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಆರೋಪಿಗಳನ್ನ‌ುಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com