ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇಂದ್ರ ಕಚೇರಿ ಮೇಲೆ ದಾಳಿ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು ಶನಿವಾರ ರೂ.100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಭಾರೀ ಭ್ರಷ್ಟಾಚಾರಕ್ಕಾಗಿ ಅಕ್ರಮವಾಗಿ ಭೂ ದಾಖಲೆಗಳನ್ನು ತಿರುಚಿ, ನಕಲಿ ದಾಖಲಾತಿಗಳ ಸೃಷ್ಟಿಸಿರುವುದರಲ್ಲಿ
ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ತೊಡಗಿಸಿಕೊಂಡಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಒಂದೇ ನಿವೇಶನವನ್ನು ಅನೇಕ ಜನರಿಗೆ ಹಂಚಿಕೆ ಮಾಡಿ, ತದನಂತರ ಅವರನ್ನು ಕೋರ್ಟ್ ಗೆ ಹೋಗುವಂತೆ ಹೇಳಲಾಗಿದೆ.
ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ತಾವೇ ಸ್ವತ: ಎಸಿಬಿಗೆ ದೂರು ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಗಳನ್ನು ಅಲ್ಲಗಳೆದಿದ್ದು, ಬಿಡಿಎನ್ನು ವ್ಯವಸ್ಥೆಯನ್ನು ಶುಚಿಗೊಳಿಸಿ ಇನ್ನಷ್ಟು ಸದೃಢ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಎಸಿಬಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.
ಇನ್ನೂ ಕೆಲವು ದಿನಗಳ ಕಾಲ ದಾಳಿ ಮುಂದುವರೆಯಲಿದೆ. ದೊರೆತ ಸಾಕ್ಷ್ಯಧಾರಗಳ ಮೇಲೆ ವಿಚಾರಣೆಗಾಗಿ ಬಿಡಿಎ ಅಧಿಕಾರಿಗಳು ವಶಕ್ಕೆ ಪಡೆಯಲಾಗುವುದು ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಖಚಿತ ಮಾಹಿತಿ ಮೇರೆಗೆ ಉಪಕಾರ್ಯದರ್ಶಿಗಳ ಕಚೇರಿ, ವಿಶೇಷ ಭೂಸ್ವಾಧೀನ ಮತ್ತಿತರರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಒಂದೇ ಆಸ್ತಿಯಲ್ಲಿ ವಿವಿಧ ವ್ಯಕ್ತಿಗಳಿಗೆ ದಾಖಲೆ ನೀಡಿರುವುದು ಪತ್ತೆಯಾಗಿದೆ. ಕೆಆರ್ ಪುರಂನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ 35 ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ಹೇಳಿದೆ.
ಅಕಾರ್ವತಿ ಲೇಔಟ್, ಕೆಂಪೇಗೌಡ ಲೇಔಟ್, ಚಂದ್ರ ಲೇಔಟ್ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡಿರುವುದನ್ನು ಕೂಡಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
Advertisement