ನಾ ಹೇಳಿದ್ದೇ ಒಂದು, ನೀವು ತಿಳ್ಕೊಂಡಿದ್ದೇ ಇನ್ನೊಂದು: ಮಹಿಳೆಯರ ಕುರಿತ ಹೇಳಿಕೆಗೆ ಸುಧಾಕರ್ ಸ್ಪಷ್ಟನೆ

ಆಧುನಿಕ ಮಹಿಳೆಯರು ಮದುವೆಯಾಗಲು, ಮಕ್ಕಳನ್ನು ಪಡೆಯಲು ಇಚ್ಚಿಸುವುದಿಲ್ಲ ಎಂಬ ತಮ್ಮ ಹೇಳಿಕೆ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಡಾ. ಕೆ. ಸುಧಾಕರ್
ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ಆಧುನಿಕ ಮಹಿಳೆಯರು ಮದುವೆಯಾಗಲು, ಮಕ್ಕಳನ್ನು ಪಡೆಯಲು ಇಚ್ಚಿಸುವುದಿಲ್ಲ ಎಂಬ ತಮ್ಮ ಹೇಳಿಕೆ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ. ಒಂಟಿ ಜೀವನ ಬಯಸುವ ಮಹಿಳೆಯರನ್ನು ಪ್ರತ್ಯೇಕಿಸುವ ಉದ್ದೇಶವಿಲ್ಲ, ಅದು ಸರ್ವೆಯೊಂದನ್ನು ಆಧರಿಸಿದೆ. ಅದರಲ್ಲಿ ಯುವ ಜನರು ಯಾವ ರೀತಿಯ ಮನೋಭಾವ ಹೊಂದಿದ್ದಾರೆ ಎಂಬುದನ್ನು ಅಂಕಿಸಂಖ್ಯೆಗಳೊಂದಿಗೆ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಅನೇಕ ಮಂದಿ ಆಧುನಿಕ ಮಹಿಳೆಯರು, ಒಂಟಿಯಾಗಿ ಬದುಕಲು ಇಷ್ಟಪಡುತ್ತಾರೆ. ಮದುವೆಯಾದರೂ ಕೂಡಾ ಮಕ್ಕಳನ್ನು ಪಡೆಯಲು ಇಚ್ಚಿಸುವುದಿಲ್ಲ. ಬಾಡಿಗೆ ತಾಯ್ತನವನ್ನು ಬಯಸುತ್ತಾರೆ. ಈ ರೀತಿಯ ಚಿಂತನೆ ಒಳ್ಳೆಯದಲ್ಲಾ ಎಂದು ನಿಮ್ಹಾನ್ಸ್ ಸಂಸ್ಥೆಯಲ್ಲಿ ಭಾನುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ  ಡಾ. ಕೆ. ಸುಧಾಕರ್ ಹೇಳಿದ್ದರು.

ಮಹಿಳೆಯರ ಕುರಿತ ಸುಧಾಕರ್ ಹೇಳಿಕೆ ವಿವಾದವಾಗಿ ಮಾರ್ಪಟ್ಟಿತ್ತು. ಈ ಕುರಿತಂತೆ ಸೋಮವಾರ ಸ್ಪಷ್ಟನೆ ನೀಡಿರುವ ಸಚಿವರು, ತನ್ನ ಹೇಳಿಕೆಯನ್ನು ಈ ರೀತಿಯಲ್ಲಿ ಅರ್ಥೈಯಿಸಿಕೊಂಡಿರುವುದು ದುರದೃಷ್ಟಕರವಾಗಿದೆ. ಹೆಣ್ಣು ಮಗಳ ತಂದೆಯಾಗಿ, ವೈದ್ಯನಾಗಿ ಮಹಿಳೆಯರಿಗೆ ಸಂಬಂಧಿಸಿದ ಸೂಕ್ಷ್ಮತೆ ಹಾಗೂ ಅವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳಲಾಗಲ್ಲ ಎಂಬುದು ಸಂಶೋಧನೆ ಮತ್ತು ಅಧ್ಯಯನಗಳಿಂದ ವ್ಯಾಪಕವಾಗಿ ತಿಳಿದುಬಂದಿದೆ. ಕುಟುಂಬ ಪದ್ಧತಿಯಿಂದ ವಿವಿಧ ಮಾನಸಿಕ ಒತ್ತಡದಿಂದ ಹೊರಬರಲು ಅನುಕೂಲವಾಗಲಿದೆ. ಸಂಪ್ರದಾಯಿಕ ಭಾರತೀಯ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಒಗ್ಗಟ್ಟಿರುತ್ತದೆ. ಇದು ಮಾನಸಿಕ ಅನಾರೋಗ್ಯದಿಂದ ಹೊರಬರಲು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.  

ಪಾಶ್ಚಿಮಾತ್ಯ ಸಮಾಜದಲ್ಲಿ ಒಂಟಿತನವನ್ನು ಪ್ರೇರೆಪಿಸಿದರೆ, ಭಾರತೀಯ ಸಮಾಜ ಒಗ್ಗಟ್ಟಿನಿಂದ ಕೂಡಿದ್ದಾಗಿದ್ದು, ಸಹಕಾರ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದಲೇ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಹಾಗೂ ಏಷ್ಯಾದವರು ತಮ್ಮ ಕುಟುಂಬದವರನ್ನು ಹೆಚ್ಚಿನ ಆರೈಕೆ ಮಾಡುವುದರೊಂದಿಗೆ, ಹೆಚ್ಚಿನ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಯು ಗೌ-ಮಿಂಟ್-ಸಿಪಿಆರ್ ಮಿಲೆನಿಯಲ್ ಸರ್ವೆ ಪ್ರಕಾರ, ಶೇ 19 ರಷ್ಟು ಮಹಿಳೆಯರು ಮದುವೆಯಾಗಲು ಅಥವಾ ಮಕ್ಕಳನ್ನು ಪಡೆಯಲು ಇಷ್ಟಪಡದಿರುವುದು ತಿಳಿದುಬಂದಿದೆ. ಇತರ ಶೇ.8 ಮಂದಿ ಮಕ್ಕಳನ್ನು ಹೊಂದಲು ಬಯಸಿದ್ದಾರೆ ಆದರೆ, ಅವರು ಮದುವೆಯಾಗಲು ಇಷ್ಟಪಟ್ಟಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com