ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಘಟನೆಯಲ್ಲಿ ಮೃತಪಟ್ಟ ಯುವಕ, ಯುವತಿಯ ಗುರುತು ಪತ್ತೆಯಾಗಿದೆ.
ಘಟನೆಲ್ಲಿ ಮೃತಪಟ್ಟ ಇಬ್ಬರು ಬಿಪಿಒ ನೌಕರರು ಪ್ರೀತಮ್ ಕುಮಾರ್ (30) ಹಾಗೂ ಕೃತಿಕಾ ರಾಮನ್ ಎಂದು ಗುರ್ತಿಸಲಾಗಿದೆ.
ಪ್ರೀತಂ ಮಾರತ್ತಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಸ್ನೇಹಿತರೊಬ್ಬರ ಫ್ಲ್ಯಾಟ್ ನಲ್ಲಿ ನೆಲೆಸಿದ್ದು, ಪೋಷಕರು ಜೆಪಿ ನಗರದಲ್ಲಿದ್ದಾರೆಂದು ತಿಳಿದುಬಂದಿದೆ.
ಕೃತಿಕಾ ಚೆನ್ನೈ ಮೂಲದವರಾಗಿದ್ದು, ಮಹದೇವಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಕುರಿತು ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಬಳಿಕ 23 ವರ್ಷದ ಕಾರು ಚಾಲಕ ನಿತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲವು ದಿನಗಳಿಂದ ಪ್ರೀತಂ ಹಾಗೂ ಕೃತಿಕಾ ಸ್ನೇಹಿತರಾಗಿದ್ದು, ಅವರಿಬ್ಬರು ಆತ್ಮೀಯ ಒಡನಾಡಿಗಳಾಗಿದ್ದರು. ಗೆಳೆಯನ ಬಳಿ ಬುಲೆಟ್ ಗಾಡಿ ಖರೀದಿಸಿದ್ದ ಪ್ರೀತಂ ಕೃತಿಕಾಳನ್ನು ಸೋಮವಾರ ರಾತ್ರಿ ಜಾಲಿ ರೈಡ್'ಗೆ ಕರೆತಂದಿದ್ದ. ಮಾರತ್ತಹಳ್ಳಿ ಕಡೆಯಿಂದ ಬಂದ ಅವರು, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿಂದ ಕಾಂಕ್ರೀಟ್ ಕಾಡಿನ ದೃಶ್ಯ ನೋಡುವ ಸಲುವಾಗಿ ಬೈಕ್ ನಿಲ್ಲಿಸಿದ್ದಾರೆ. ಮೊದಲು ಬೈಕ್ ನಿಂದ ಕೃತಿಕಾ ಇಳಿದಿದ್ದಾರೆ.
ಗೆಳತಿ ಇಳಿದ ಬಳಿಕ 5 ಅಡಿ ಮುಂದೆ ಹೋಗಿದ್ದ ಪ್ರೀತಂ ನಂತರ ಬೈಕನ್ನು ತಳ್ಳಿಕೊಂಡು ಲೇ ಬೇಗೆ ಮರಳಿದ್ದಾರೆ. ಅಲ್ಲಿ ಅವರು ನಿಂತ 10 ಸೆಕೆಂಡ್'ಗೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಇನ್ನು ಅಪಘಾತ ನಡೆಸಿದ ನಿತೀಶ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಬೊಮ್ಮಸಂದ್ರ ನಿವಾಸಿಯಾಗಿದ್ದಾನೆ. ಘಟನೆ ವೇಳೆ ಈತನಿಗೂ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖಾ ವರದಿ ಪ್ರಕಾರ. ಕಾರಿನಲ್ಲಿ ನಿತೀಶ್ ಒಬ್ಬನೇ ಇದ್ದು, ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಡಿಕ್ಕಿ ಹೊಡೆದ ಸಂದರ್ಭದಲ್ಲಿ ಕಾರಿನ ವೇಗ ಗಂಟೆಗೆ 120 ಕಿಮೀ ಇದ್ದು, ನಿತೀಶ್ ಕ್ರಿಕೆಟ್ ಪ್ರಾಕ್ಟೀಸ್ ನಿಂದ ಮನೆಗೆ ಮರಳುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿತಿಶ್ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕಾರು ಚಾಲನೆ ವೇಳೆ ಪಾನಮತ್ತನಾಗಿದ್ದನೇ ಅಥವಾ ಇನ್ನಾವುದೇ ಅಮಲಿನಲ್ಲಿದ್ದನೇ ಎಂಬುದ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಬಿ ಆರ್ ರವಿಕಾಂತೇಗೌಡ ಹೇಳಿದ್ದಾರೆ.
Advertisement