ಬೆಂಗಳೂರು ಅಗ್ನಿ ಅವಘಡ: ಅಮೆರಿಕದಿಂದ ಬಂದ 24 ಗಂಟೆಗಳಲ್ಲೇ ಘನಘೋರ ದುರಂತ..!

ಬೆಂಗಳೂರು ಅಪಾರ್ಟ್​ಮೆಂಟ್​ ಅಗ್ನಿ ಅವಘಡದಲ್ಲಿ ಸಜೀವ ದಹನವಾದ ತಾಯಿ ಮತ್ತು ಮಗಳ ದುರಂತ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ತಾಯಿ ಲಕ್ಷ್ಮೀದೇವಿ (82 ವರ್ಷ), ಪುತ್ರಿ ಭಾಗ್ಯ ರೇಖಾ (59 ವರ್ಷ) ಅವರು ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಅಪಾರ್ಟ್ ಮೆಂಟ್ ಅಗ್ನಿ ಅವಘಡ
ಬೆಂಗಳೂರು ಅಪಾರ್ಟ್ ಮೆಂಟ್ ಅಗ್ನಿ ಅವಘಡ

ಬೆಂಗಳೂರು: ಬೆಂಗಳೂರು ಅಪಾರ್ಟ್​ಮೆಂಟ್​ ಅಗ್ನಿ ಅವಘಡದಲ್ಲಿ ಸಜೀವ ದಹನವಾದ ತಾಯಿ ಮತ್ತು ಮಗಳ ದುರಂತ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ತಾಯಿ ಲಕ್ಷ್ಮೀದೇವಿ (82 ವರ್ಷ), ಪುತ್ರಿ ಭಾಗ್ಯ ರೇಖಾ (59 ವರ್ಷ) ಅವರು ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬಿಟಿಎಂ ಲೇಔಟ್ ನಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ ಮೆಂಟ್ ನ 210 ನೇ ಫ್ಲ್ಯಾಟ್‌ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ತಾಯಿ, ಪುತ್ರಿ ಮೃತದೇಹ ಪತ್ತೆಯಾಗಿದೆ.  ಅಲ್ಲದೆ ಅಗ್ನಿ ಅವಘಡದಲ್ಲಿ ಭೀಮಸೇನ್‌ ಎಂಬುವವರಿಗೆ ಗಾಯಗೊಂಡಿದ್ದಾರೆ. ಗಾಯಾಳು ಭೀಮಸೇನ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭೀಮಸೇನ್‌ ತಲೆ, ಕೈ-ಕಾಲುಗಳಲ್ಲಿ ಸುಟ್ಟಗಾಯ ಆಗಿದೆ. 

ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು
ಇಂದು ಅಗ್ನಿ ದುರಂತದಲ್ಲಿ ಸಜೀವದಹನವಾದ ತಾಯಿ ಮತ್ತು ಮಗಳು ನಿನ್ನೆಯಷ್ಟೇ ಅಮೆರಿಕದಿಂದ ಆಗಮಿಸಿದ್ದರು.  ಅದಾಗ್ಯೂ ದುರಂತ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಈ ಇಬ್ಬರು ಮಾತ್ರ ಇದ್ದರು ಎನ್ನಲಾಗಿದೆ.

ಸಿಲಿಂಡರ್ ಸ್ಫೋಟದಿಂದ ದುರಂತ: ಅಗ್ನಿಶಾಮಕ ದಳ
ದುರಂತಕ್ಕೆ ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಕಾರಣ ಎಂದು ಶಂಕಿಸಲಾಗಿದೆ.  ಈ ಬಗ್ಗೆ ಅಗ್ನಿಶಾಮಕ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಹೇಳಿಕೆ ನೀಡಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದ ಶಂಕೆ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸಿಲಿಂಡರ್ ಸ್ಫೋಟ ಶಂಕೆ ವ್ಯಕ್ತವಾಗಿದೆ. ತನಿಖೆ ನಂತರ ವಾಸ್ತವಾಂಶ ತಿಳಿಯಲಿದೆ. ಏರಿಯಲ್ ಲ್ಯಾಡರ್ ಪ್ಲಾಟ್​ಫಾರಂ ಮಷೀನ್​ ಬಂದಿದೆ. ಅತ್ಯಂತ ಕ್ಲಿಷ್ಟ ಸಂದರ್ಭದಲ್ಲಿ ಮಾತ್ರ ಈ ಯಂತ್ರ ಬಳಸ್ತೇವೆ. ಅಗ್ನಿಶಾಮಕ ದಳದ 5 ವಾಹನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ನಿಖರ ಕಾರಣ ಪತ್ತೆಯಾಗಿಲ್ಲ
ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ತೆರಳಿದ್ದಾರೆ. ಸ್ಪೀಕರ್ ಅನುಮತಿ ಪಡೆದು ವಿಧಾನಸಭೆಯಿಂದ ನಿರ್ಗಮಿಸಿದ್ದಾರೆ. ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ನಿರ್ಗಮಿಸಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿಯಿಂದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ. ಮನೆ ಸಂಪೂರ್ಣ ಸುಟ್ಟ ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದವರ ಮಾಹಿತಿ ಪ್ರಕಾರ ಘಟನೆ ಸಿಲಿಂಡರ್ ಸ್ಫೋಟವಲ್ಲ. ಯಾವುದೇ ಸ್ಫೋಟದ ಸದ್ದು ಕೇಳಿ ಬಂದಿಲ್ಲ ಎಂಬ ಮಾಹಿತಿ ದೊರಕಿದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್​ನಿಂದ ಅನಾಹುತ ಸಂಭವಿಸಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಘಟನೆಗೆ ಇನ್ನೂ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿ ರಾಮಕೃಷ್ಣ, ಅಗ್ನಿಶಾಮಕ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ​ ನಡೆಯುತ್ತಿದೆ. ಹೊಗೆ ದಟ್ಟವಾಗಿ ಆವರಿಸಿರುವುದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಗಿದೆ. ಬೆಂಕಿ ನಂದಿಸಲು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಹೇಳಿದ್ದಾರೆ. 

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವುದರಿಂದ ನಿವಾಸಿಗಳಿಗೆ ಸಮೀಪದ ಅಪಾರ್ಟ್​ಮೆಂಟ್​ನಲ್ಲಿ ಆಶ್ರಯ ಒದಗಿಸಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com