ಬೆಂಗಳೂರು: ನಗರದ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ಬಸ್ ನಿಲ್ದಾಣದ ವೀರೇಶ್ ಥಿಯೇಟರ್ ಬಳಿ ಮೊನ್ನೆ ಗುರುವಾರ ರಾತ್ರಿ 8.30ರ ಸುಮಾರಿಗೆ ಎರಡು ಗುಂಪಿನ ವ್ಯಕ್ತಿಗಳು ಕ್ಷುಲ್ಲಕ ವಿಚಾರಕ್ಕೆ ಮಾರಕಾಯುಧ ಹಿಡಿದು ಪರಸ್ಪರ ಹಲ್ಲೆ ನಡೆಸಿದ್ದರಿಂದ ಸುತ್ತಮುತ್ತಲಿದ್ದ ಜನರು ಭೀತರಾಗಿ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ಗುಂಪುಗಳು ಪರಸ್ಪರ ಪರಿಚಿತರು ಎನ್ನಲಾಗಿದೆ. ಗೋವಿಂದರಾಜನಗರ ಪೊಲೀಸರು ದೂರು ದಾಖಲಿಸಿಕೊಂಡು ಪ್ರತಿದೂರು ದಾಖಲಿಸಿದ್ದಾರೆ.
ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಗ್ರಹಾರ ದಾಸರಹಳ್ಳಿ ನಿವಾಸಿ ಆರ್ ಪ್ರವೀಣ್ (30) ಗಾಯಾಳು ಎಂದು ಗುರುತಿಸಲಾಗಿದ್ದು, ಪ್ರಜ್ವಲ್ ಅಲಿಯಾಸ್ ಗುಂಡ, ಪ್ರಶಾಂತ್ ಮತ್ತು ಕಿರಣ್ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ಹೇಳಿಕೊಂಡಿದ್ದಾನೆ.
ನಡೆದ ಘಟನೆಯೇನು: ಪ್ರವೀಣ್ ತನ್ನ ಸ್ನೇಹಿತ ಚಂದ್ರು ಜೊತೆಗೆ ಟೀ ಕುಡಿಯಲು ಬಸ್ ನಿಲ್ದಾಣದ ಬಳಿ ಹೋಗಿದ್ದನು. ಅಲ್ಲಿಗೆ ಬಂದ ಮೂವರು ಪ್ರವೀಣ್ ಮತ್ತು ಆತನ ಸ್ನೇಹಿತನನ್ನು ದಿಟ್ಟಿಸಿ ನೋಡಿದರು, ದಿಟ್ಟಿಸಿ ನೋಡುತ್ತಿರುವುದು ಏಕೆ ಎಂದು ಮಾತಿಗೆ ಮಾತು ಬೆಳೆದು ಜಗಳ ಆರಂಭವಾಯಿತು. ತೀವ್ರ ವಾಗ್ವಾದ ಮುಂದುವರಿದು ಮೂವರು ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ, ಪ್ರವೀಣ್ ಮತ್ತು ಅವನ ಸ್ನೇಹಿತ ಮೂವರು ಶಂಕಿತರಿಂದ ಶಸ್ತ್ರಾಸ್ತ್ರಗಳನ್ನು ಎಳೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರವೀಣ್ ನನ್ನು ಸ್ನೇಹಿತ ಆಸ್ಪತ್ರೆಗೆ ಕರೆದೊಯ್ದಿದ್ದು ಪೊಲೀಸ್ ಠಾಣೆಗೆ ಬಂದು ರಾತ್ರಿ 11. 30 ರ ಸುಮಾರಿಗೆ ಮೂವರು ಶಂಕಿತರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ದೂರು ದಾಖಲಾದ ಇಪ್ಪತ್ತು ನಿಮಿಷಗಳ ನಂತರ, ಶಂಕಿತರಲ್ಲಿ ಒಬ್ಬರಾದ ಪ್ರಶಾಂತ್ ಕೂಡ ತಮ್ಮ ಮೇಲೆ ಹಲ್ಲೆ ನಡೆಸಿದ ಪ್ರವೀಣ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾನೆ.
ಎರಡೂ ಪ್ರಕರಣಗಳಲ್ಲಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಶಾಂತ್ ವಿರುದ್ಧ ಎಂ.ಎನ್.ಹಳ್ಳಿ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ, ಪ್ರಜ್ವಲ್ ವಿರುದ್ಧ ಎಂ.ಎನ್.ಹಳ್ಳಿ, ಮಾಗಡಿ ರಸ್ತೆ ಹಾಗೂ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಪ್ರವೀಣ್ ಕೂಡ ಪೊಲೀಸರಿಗೆ ಬೇಕಾಗಿದ್ದಾನೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement